ಹರಪನಹಳ್ಳಿ: ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಜಿಲ್ಲಾ ಮುಖ್ಯ ರಸ್ತೆ ವಿಸ್ತರಣೆ ವಿರೋಧಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ಗ್ರಾಪಂ ಅದ್ಯಕ್ಷ ರುದ್ರಪ್ಪ, ಪಿಡಿಒ ಆನಂದಗೆ ಮನವಿ ಸಲ್ಲಿಸಿದರು.
ಆಂಜನೇಯ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಗ್ರಾಪಂ ಕಚೇರಿಗೆ ಆಗಮಿಸಿ, ಬಹಿರಂಗ ಸಭೆ ನಡೆಸಿದರು. ಯಾವುದೇ ಕಾರಣಕ್ಕೂ ಗ್ರಾಮದ ಮಧ್ಯೆ ಇರುವ ಮುಖ್ಯ ರಸ್ತೆಯ ವಿಸ್ತರಣೆ ಮಾಡಬಾರದು. ಆಂಜನೇಯ ದೇವಸ್ಥಾನದ ಹಿಂಭಾಗದ ಗ್ರಾಮ ಠಾಣಾ ಜಾಗದಲ್ಲಿ ಬೈಪಾಸ್ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ಬಾಕ್ಸ್ ಚರಂಡಿ ಮಾಡಲು ರಸ್ತೆ ಎಡಕ್ಕೆ 350 ಮೀಟರ್, ಬಲಕ್ಕೆ 350 ಮೀಟರ್ ಅಗಲಕ್ಕೆ ತೆರವುಗೊಳಿಸಬೇಕಾಗಿರುತ್ತದೆ, ಆದ್ದರಿಂದ ಈ ರಸ್ತೆಯ ಇಕ್ಕೆಲಗಳಲ್ಲಿ ಬರುವ ಕಟ್ಟಡಗಳನ್ನು ತೆರವುಗೊಳಿಸಲು ಗ್ರಾಪಂಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪತ್ರ ಬರೆದಿದ್ದಾರೆ.
2007ರಲ್ಲಿ ರಸ್ತೆ ವಿಸ್ತಣೆ ಮಾಡಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಮನೆ ಕಳೆದುಕೊಂಡಿದ್ದಾಗಿಯೂ, ಪುನಃ ರಸ್ತಗೆ ವಿಸ್ತರಣೆ ಮಾಡಿದರೆ ಅಳಿದುಳಿದ ಮನೆಗಳನ್ನು ಪೂರ್ಣ ಪ್ರಮಾಣದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಇದ್ದ ಸ್ಥಳದಲ್ಲೇ ಬಾಕ್ಸ್ ಚರಂಡಿ ನಿರ್ಮಿಸಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಪ್ರಮುಖರಾದ ಎ.ಈಶ್ವರಪ್ಪ, ಬ್ರೆಡ್ ಶಿವಣ್ಣ, ಸಣ್ಣಕ್ಕಿ ಜಗದೀಶಪ್ಪ, ಗಜೇಂದ್ರಪ್ಪ, ನೇಕಾರ ಮಾರುತಿ, ನಾಗರಾಜಪ್ಪ, ಅಧಿಕಾರ ಮಂಜಪ್ಪ, ದ್ಯಾಮಾಳ್ಳಿ ಶೇಕಪ್ಪ, ಪೂಜಾರ ಗುಡ್ಡಪ್ಪ, ದಾದಾಪುರ ಸುನಿಲ್, ಮಹೇಂದ್ರ, ಪ್ರತಿಭಟನೆಯಲ್ಲಿ ಇತರರು ಇದ್ದರು.