ಹನುಮಸಾಗರ: ಇಲ್ಲಿನ ಪ್ರಮುಖ ರಸ್ತೆಗಳಿಗೆ ಟ್ಯಾಂಕರ್ನಿಂದ ನೀರು ಸಿಂಪಡಿಸುವ ಮೂಲಕ ಧೂಳು ನಿಯಂತ್ರಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸ್ಥಳೀಯ ಘಟಕದ ಕಾರ್ಯಕರ್ತರು ಗುರುವಾರ ಪಿಡಿಒ ನಿಂಗಪ್ಪ ಮೂಲಿಮನಿಗೆ ಮನವಿ ಸಲ್ಲಿಸಿದರು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಏಳುತ್ತಿರುವ ಧೂಳು ಹೇಳತೀರದಾಗಿದೆ. ಇದರಿಂದ ಸಾರ್ವಜನಿಕರು, ವಾಹನ ಸವಾರರು, ರಸ್ತೆ ಪಕ್ಕ ಮನೆ ಇರುವವರು ತೊಂದರೆ ಅನುಭವಿಸುತ್ತಿದ್ದಾರೆ. ಜನರಿಗೆ ರೋಗದ ಭೀತಿ ಎದುರಾಗಿದ್ದು, ಗ್ರಾಮಾಡಳಿತ ಕೂಡಲೇ ಧೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಸರ್ಕಲ್ನಿಂದ ಹೊಸ ಸರ್ಕಾರಿ ಆಸ್ಪತ್ರೆವರೆಗೆ ಟ್ಯಾಂಕರ್ ಮೂಲಕ ನೀರು ಬಿಡಬೇಕು. ರಸ್ತೆ ಅಭಿವೃದ್ಧಿಗೆ ಈಗಾಗಲೇ ಭೂಮಿಪೂಜೆ ಮಾಡಲಾಗಿದ್ದು, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಕಾಮಗಾರಿ ಮುಗಿಯುವವರೆಗೆ ನೀರು ಸಿಂಪಡಿಸಬೇಕು ಎಂದು ಆಗ್ರಹಿಸಿದರು. ಪಕ್ಷದ ಕಾರ್ಯಕರ್ತರಾದ ಬಸವರಾಜ ಕವಲೂರು, ಶಿವು ಮುಳಗುಂದ, ರಾಹುಲ್ ಶಿಂಗ್, ಶಂಕರ ಬಳೂಟಗಿ, ಶಶಿ ಸಿನ್ನೂರು, ಗ್ರಾಪಂ ಸದಸ್ಯರಾದ ಶ್ರೀಶೈಲ ಮೋಟಗಿ, ಮರಿಗೌಡ ಬೋದೂರು, ರಮೇಶ ಬಡಿಗೇರ ಇತರರಿದ್ದರು.