ಹನುಮಸಾಗರ: ಪಟ್ಟಣದ ಕುಂಬಾರ ಓಣಿಯಲ್ಲಿ ಶುಕ್ರವಾರ ವಿದ್ಯುತ್ ತಂತಿ ಮೇಲೆ ತೆಂಗಿನ ಮರ ಬಿದ್ದು 9 ಕಂಬಗಳು ಮುರಿದಿವೆ.
ಮನೆಯ ಮುಂದೆ ಬೆಳೆದ ತೆಂಗಿನ ಮರ ಕಡಿಯಲು ವ್ಯಕ್ತಿಯೊಬ್ಬರು ಮುಂದಾಗಿದ್ದರು. ಮರದ ಪಕ್ಕದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದನ್ನು ಗಮನಿಸಿ ಟಿಸಿಯ ಫ್ಯೂಜ್ ಪ್ಯೂಜ್ ತೆಗೆದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿದ್ಯುತ್ ತಂತಿ ಮೇಲೆ ಬೀಳದಂತೆ ಮರಕ್ಕೆ ಹಗ್ಗ ಕಟ್ಟಿದ್ದರು. ಆದರೆ, ಹಗ್ಗ ತುಂಡಾಗಿ ಅವಘಡ ಸಂಭವಿಸಿದೆ. ಅಕ್ಕಪಕ್ಕದ 9 ವಿದ್ಯುತ್ ಕಂಬಗಳು ಮುರಿದು ಮನೆಗಳ ಮೇಲೆ ಮತ್ತು ದಾರಿಯಲ್ಲಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಕುರಿತು ಜೆಸ್ಕಾಂ ಶಾಖಾ ವ್ಯವಸ್ಥಾಪಕ ಬಸವರಾಜ ಮುದಗಲ್ ಪ್ರತಿಕ್ರಿಯಿಸಿ, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮುರಿದ ಕಂಬಗಳನ್ನು ಬಲಿಸಲು ಕ್ರಮ ಕೈಗೊಳ್ಳಳ್ಳಲಾಗಿದೆ ಎಂದು ತಿಳಿಸಿದರು.