ಹನುಮಸಾಗರ: ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಗೆ ಗಡಚಿಂತಿ ಗ್ರಾಮದ ಯಲ್ಲಮ್ಮನ ಹಳ್ಳ ರಭಸವಾಗಿ ಹರಿಯುತ್ತಿದ್ದು, ಅದರೊಂದಿಗೆ ಬಂದ ಮೀನುಗಳನ್ನು ಹಿಡಿಯಲು ಜನ ಮುಗಿಬಿದ್ದ ದೃಶ್ಯ ಭಾನುವಾರ ಕಂಡುಬಂತು. ಭಾರಿ ಮಳೆಗೆ ಗಜೇಂದ್ರಗಡ ತಾಲೂಕಿನ ಜಿಗೇರಿ ಕೆರೆ ತುಂಬಿ ಕೋಡಿ ಬಿದ್ದಿದೆ. ಅಲ್ಲಿಂದ ಹಳ್ಳಕ್ಕೆ ನೀರಿನ ಸಮೇತ ಮೀನುಗಳು ತೇಲಿ ಬರುತ್ತಿವೆ. ಇದನ್ನು ಕಂಡ ಅಕ್ಕಪಕ್ಕದ ಗ್ರಾಮದವರು ಯಲ್ಲಮ್ಮನ ಹಳ್ಳ ಹಾಗೂ ಗಡಚಿಂತಿ ಗ್ರಾಮದ ಚೇಕ್ ಡ್ಯಾಂ ಹತ್ತಿರ ಮೀನುಗಳನ್ನು ಹಿಡಿಯಲು ಮುಗಿಬಿದ್ದರು.
ರಸ್ತೆ ನಿರ್ಮಿಸಲು ಆಗ್ರಹ: ಗಡಚಿಂತಿ ಗ್ರಾಮದ ರಸ್ತೆಯು ಮಾಲಗಿತ್ತಿಯಿಂದ ವಾರಿಕಲ್ ಮಾರ್ಗವಾಗಿ ಗಜೇಂದ್ರಗಡ ಕೂಡು ರಸ್ತೆಯಾಗಿದೆ. ಮಳೆಯಾದಾಗ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಬಂದಾಗುತ್ತದೆ. ಆದ್ದರಿಂದ ರಸ್ತೆಯನ್ನು ಎತ್ತರ ಮಟ್ಟದಲ್ಲಿ ನಿರ್ಮಿಸಬೇಕು ಎಂದು ಗ್ರಾಮಸ್ಥರಾದ ವೆಂಕಟೇಶ, ಯಮನೂರಪ್ಪ, ಶರಣು, ಕಳಕಪ್ಪ, ಹನುಮಂತ ಇತರರು ಆಗ್ರಹಿಸಿದ್ದಾರೆ.