ಮಂಗಳೂರು: ಮಂಡ್ಯ ಜಿಲ್ಲೆಯ ಕರೆಗೋಡು ಆಂಜನೇಯ ದೇವಸ್ಥಾನದ ಮುಂಭಾಗವಿದ್ದ ಹನುಮಧ್ವಜ ತೆರವು ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಫೆ.9,10ರಂದು ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ಹಮ್ಮಿಕೊಂಡಿದೆ.
ಕರಗೋಡುವಿನಲ್ಲಿ ಸ್ಥಳೀಯ ಪಂಚಾಯಿತಿ ಪರವಾನಗಿ ಪಡೆದೇ ಹನುಮ ಧ್ವಜ ಹಾಕಲಾಗಿತ್ತು. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಹಿಂದು ವಿರೋಧಿಗಳು ಸರ್ಕಾರಕ್ಕೆ ಒತ್ತಡ ಹಾಕಿ ತೆರವುಗೊಳಿಸಿದ್ದಾರೆಂದು ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಡ್ಯದ ಈ ಘಟನೆ ಧರ್ಮ ವಿರೋಧಿ ಕೃತ್ಯ. ಮತ್ತೆ ಅಲ್ಲಿಯೇ ಧ್ವಜ ಹಾರಾಟಕ್ಕೆ ಅವಕಾಶಕ್ಕೆ ಆಗ್ರಹಿಸಿ ಫೆ.10ರ ವರೆಗೆ ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ನಡೆಯಲಿದೆ. ಪ್ರತಿ ಮನೆಗಳಲ್ಲಿ, ಧ್ವಜಕಟ್ಟೆ, ಧಾರ್ಮಿಕ ಕೇಂದ್ರಗಳಲ್ಲಿ ಹನುಮಧ್ವಜದ ಹಾರಿಸಲಾಗುವುದು. 9ರಂದು ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದು ಸಂಘಟನೆಗಳು ಹನುಮಾನ್ ಚಾಲಿಸಾ ಪಠಣ ಮೂಲಕ ಪ್ರತಿಭಟನೆ ನಡೆಸಲಿವೆ ಎಂದರು. ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕೆನ್ನುವ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಭಾರತ ವಿಭಜನೆಗೆ ಅವಕಾಶ ನೀಡುವುದಿಲ್ಲ. ಅಪಘಾನಿಸ್ತಾನ, ಪಾಕಿಸ್ತಾನವೂ ಭಾರತದ ಭಾಗವಾಗಬೇಕು. ಇದೇ ಉದ್ದೇಶದಿಂದ ಪ್ರತಿವರ್ಷ ಆ.14ರಂದು ರಾತ್ರಿ ಅಖಂಡ ಭಾರತಕ್ಕೆ ಸಂಕಲ್ಪ ದಿನ ಆಚರಿಸುತ್ತಿದ್ದೇವೆ ಎಂದರು.
ವಿಹಿಂಪ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ, ಜಿಲ್ಲಾ ಸಹ ಸಂಯೋಜಕ ಪ್ರೀತಮ್ ಕಾಟಿಪಳ್ಳ ಉಪಸ್ಥಿತರಿದ್ದರು.