ಕೊಪ್ಪಳ: ಹನುಮ ಮಾಲೆ ವಿಸರ್ಜನೆಯ ಸಂಕೀರ್ತನಾ ಯಾತ್ರೆ ಹಿನ್ನೆಲೆ ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾತ್ರೆ ಹಿನ್ನೆಲೆಯಲ್ಲಿ ಇಡೀ ಗಂಗಾವತಿ ಕೇಸರಿಮಯ ಆಗಿದೆ. ಮತ್ತೊಂದೆಡೆ ಪೊಲೀಸ್ ಭಾರಿ ಬಂದೋಬಸ್ತ ಮಾಡಲಾಗಿದ್ದು, ಅಂಜನಾದ್ರಿ ಬೆಟ್ಟ ಮತ್ತು ಗಂಗಾವತಿ ನಗರ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿದೆ. ಲಕ್ಷಂತರ ಭಕ್ತರು ಬರುವ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ನಾಳೆ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮ ಇದ್ದು ಸುಮಾರು 1 ಲಕ್ಷಕ್ಕೂ ಹೆಚ್ಚು ಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ಇಂದು ರಾತ್ರಿಯೇ ಬೆಳಗಾವಿ ಜಿಲ್ಲೆಯ ಭಕ್ತರು ಹುಲಿಗಿ ದೇವಸ್ಥನಕ್ಕೆ ಬರಲಿದ್ದಾರೆ. ಹೀಗಾಗಿ ಸುಮಾರು 40 ಸಾವಿರ ಮಾಲಾಧಾರಿಗಳಿಗೆ ಹುಲಿಗೆಮ್ಮ ದೇವಸ್ಥಾನದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಬೆಳಗಾವಿ ಭಕ್ತರನ್ನು ಅದ್ಧೂರಿಯಾಗಿ ಸ್ವಾಗತ ಮಾಡುವ ವ್ಯವಸ್ಥೆ ಮಾಡಲಾಗಿದೆ. ಭಕ್ತರನ್ನು ಖುದ್ದು ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತಿಸಲಿದ್ದಾರೆ.
ಇನ್ನು ಮಾಲಾಧಾರಿಗಳು ಗಂಗಾವತಿ ನಗರದ ಮೂಲಕವೂ ಅಂಜನಾದ್ರಿ ಬೆಟ್ಟಕ್ಕೆ ಬರಲಿದ್ದು ನಗರ ಇಡೀ ಕೇರಸಿಮಯವಾಗಿದೆ. ಅಲ್ಲಿನ ತಾಲೂಕು ಆಡಳಿತ 40 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳಿಎ ತಂಗಲು ವ್ಯವಸ್ಥೆ ಮಾಡಿಕೊಟ್ಟಿದೆ. ಗಂಗಾವತಿಯ ಎಪಿಎಂಸಿ, ಬೇರೆ ಬೇರೆ ಕಲ್ಯಾಣ ಮಂಟಪಗಳು, ಹೀಗೆ ಅನೇಕ ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬಂದಿರುವ ಭಕ್ತರಿಗೆ ಅಂಜನಾದ್ರಿ ಬೆಟ್ಟದ ಕೆಳಗೆ ಉಳಿಯಲು ವ್ಯವಸ್ಥೆ ಮಾಡಲಾಗಿದೆ.
ಮಾಲಾಧಾರಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಅಂಜನಾದ್ರಿ ಆಡಳಿತ ಮಂಡಳಿ ಊಟದ ವ್ಯವಸ್ಥೆ ಕೂಡ ಮಾಡಿದೆ. ಕೊಪ್ಪಳ ಭಾಗದಿಂದ ಬರುವ ಭಕ್ತರಿಗೆ ಹನುಮನಹಳ್ಳಿ ಗ್ರಾಮದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಗಂಗಾವತಿ ಭಾಗದಿಂದ ಬೆಟ್ಟಕ್ಕೆ ಬರುವ ಭಕ್ತರಿಗೆ ಆನೆಗೊಂದಿ, ಪಂಪಾ ಸರೋವರದ ಬಳಿ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.