ಹುಬ್ಬಳ್ಳಿ: ಇದೀಗ ಎಲ್ಲೆಡೆ ಕರೊನಾ ವೈರಸ್ ಸೋಂಕಿನ ಭಯ ಹಬ್ಬಿದೆ. ಕೈಯನ್ನು ಸ್ವಚ್ಛಗೊಳಿಸಿಕೊಳ್ಳದೆ ಯಾವುದೇ ವಸ್ತುವನ್ನು ಮುಟ್ಟಲು ಜನ ಹೆದರುತ್ತಿದ್ದಾರೆ. ಕೈಯಲ್ಲಿ ಡಿಸ್ಪೆನ್ಸರ್ ಅನ್ನು ಮುಟ್ಟಿ, ಕೊಳಾಯಿ ತಿರುಗಿಸಿ ನೀರು ಬಿಟ್ಟುಕೊಂಡು ಕೈತೊಳೆಯಲೂ ಹಿಂದೇಟು ಹಾಕುವ ಮಟ್ಟಿಗೆ ಈ ಭಯ ಹಬ್ಬಿಕೊಂಡಿದೆ.
ಈ ಭಯ ನಿವಾರಣೆಗಾಗಿ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಮುಟ್ಟದೆಯೇ ಕೈಸ್ವಚ್ಛಗೊಳಿಸುವ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಇದನ್ನು ಬಳಸುವುದರಿಂದ ನೀರಿನ ಉಳಿತಾಯವೂ ಆಗುತ್ತದೆ ಎಂದು ಹೇಳಿದ್ದಾರೆ.
ಸದ್ಯ ಈ ಯಂತ್ರ ಹುಬ್ಬಳ್ಳಿ ವಿಭಾಗದ ಕ್ಯಾರೇಜ್ ಮತ್ತು ವ್ಯಾಗನ್ ಡಿಪೋದಲ್ಲಿ ಸ್ಥಾಪನೆಗೊಂಡಿದೆ. ವಿಭಾಗೀಯ ರೈಲ್ವೆ ಪ್ರಬಂಧಕ ಅರವಿಂದ್ ಮಲ್ಕೇಡ್ ನಿರ್ದೇಶನದಂತೆ ವಿಭಾಗೀಯ ಅಧಿಕಾರಿಗಳು ಈ ಯಂತ್ರವನ್ನು ಸಿದ್ಧಪಡಿಸಿದ್ದಾರೆ.
ಯಂತ್ರದ ಕಾರ್ಯನಿರ್ವಹಣೆಯ ಬಗೆ…: ದೊಡ್ಡ ಸಿಂಟೆಕ್ಸ್ ಟ್ಯಾಂಕ್ನ ಎಡ ಮತ್ತು ಬಲಬದಿಯಲ್ಲಿ ಪ್ರತ್ಯೇಕವಾಗಿ ಎರಡು ಲಿವರ್ ನೀಡಲಾಗಿದೆ. ಮಧ್ಯದಲ್ಲಿ ಸಿಂಕ್ ಅನ್ನು ಜೋಡಿಸಲಾಗಿದೆ.
ಬಲಬದಿಯ ಲಿವರ್ ಒತ್ತಿದರೆ ಸ್ಯಾನಿಟೈಸರ್ ಹೊರಬರುತ್ತದೆ. ಅದರಿಂದ ಕೈಯನ್ನು ಸ್ವಚ್ಛಗೊಳಿಸಿಕೊಂಡು, ಎಡಬದಿಯ ಲಿವರ್ ಒತ್ತಿ ನೀರಿನಲ್ಲಿ ಕೈತೊಳೆದುಕೊಳ್ಳಬಹುದು. ಈ ರೀತಿ ಕೊಳಾಯಿಯನ್ನು ಮುಟ್ಟದೆ ಕೈಸ್ವಚ್ಛಗೊಳಿಸಿಕೊಳ್ಳಬಹುದಾಗಿದೆ.
ಈ ಯಂತ್ರ ಸಾಕಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ಇಂಥ ಇನ್ನೂ 100 ಯಂತ್ರಗಳನ್ನು ಸ್ಥಾಪಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಲಾಕ್ಡೌನ್ನಿಂದ ಬಡವರಿಗೆ ತೀವ್ರ ಸಂಕಷ್ಟಕ್ಕೆ ಪ್ರಧಾನಿ ಮೋದಿ ಸ್ಪಂದನೆ, ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ