ಹಗರಿಬೊಮ್ಮನಹಳ್ಳಿ: ಶಾಸಕ ಭೀಮಾನಾಯ್ಕರ ಪತ್ನಿ ವಿವಾದಿತ ಭೂಮಿ ಖರೀದಿಸಿದ್ದ ಹಿನ್ನಲೆಯಲ್ಲಿ ಬಡ ಕುಟುಂಬದವರ ರಕ್ಷಣೆಗೆ ತಾಲೂಕು ಕುರುಬರ ಸಂಘ ಮುಂದಾಗಿದೆ ಎಂದು ವಕೀಲ ಅಶೋಕ ಕನಕೇರಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಂಪಾಪಟ್ಟಣ ಗ್ರಾಪಂ ವ್ಯಾಪ್ತಿಯ ಕೇಶವರಾಯನ ಬಂಡಿ ಗ್ರಾಮದ ಬಳಿಯ ಉಳಿಗಾಯಿ ಕಡ್ಲೆಪ್ಪನವರ ಕುಟುಂಬಕ್ಕೆ ಸಂಬಂಧಿಸಿದ ಭೂಮಿಯನ್ನು ಶಾಸಕರ ಪತ್ನಿ ಗೀತಾ ಭೀಮಾನಾಯ್ಕ ಖರೀದಿಸಿ ನೋಂದಾಯಿಸಿದ ಬಳಿಕ ಬಡಕುಟುಂಬದವರು ತಾಲೂಕು ಕುರುಬ ಸಮಾಜದವರ ಮೊರೆ ಹೋಗಿದ್ದಾರೆ. ದಾಖಲಾತಿಗಳನ್ನು ಪರಿಶೀಲಿಸಿ ಕುಟುಂಬದವರ ಬೆಂಬಲಕ್ಕೆ ಕುರುಬ ಸಮಾಜ ಬೆಂಬಲಿಸಿದೆ.
ಶಾಸಕ ಸ್ಥಾನದಲ್ಲಿರುವವರಿಗೆ ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ ವಿವಾದಿತ ಭೂಮಿ ಖರೀದಿಸಿ ಹೋರಾಟಕ್ಕೆ ಮುಂದಾದ ಮೇಲೆ ಅವರಿಗೆ ಮರು ಮಾರಾಟ ಮಾಡಿರುವುದು ಏಕೆ? ಎಲ್ಲ ದಾಖಲೆಗಳು ಸರಿಯಿದ್ದರೇ ಮರು ಮಾರಾಟಕ್ಕೆ ಏಕೆ ಮುಂದಾದರು? ಪ್ರಸ್ತುತ ವಿವಾದಿತ ಭೂಮಿಯಲ್ಲಿ ಉಳಿಗಾಯಿ ಕುಟುಂಬದವರೇ ಉಳುಮೆ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಶಾಸಕರ ಪತ್ನಿಯನ್ನೂ ಪಕ್ಷಗಾರನ್ನಾಗಿಸಿದೆ. ಕೋರ್ಟ್ ಕೇಳುವ ಪ್ರಶ್ನೆಗೆ ಅಲ್ಲಿಯೇ ಉತ್ತರ ನೀಡಲಿ. ಪರ ವಕೀಲರಿಂದ ಸುದ್ದಿಗೋಷ್ಟಿ ನಡೆಸಿ ಜನರಿಗೆ ತಾವು ತಪ್ಪು ಮಾಡಿಲ್ಲವೆಂದು ಸಾಬೀತು ಪಡಿಸಿಕೊಳ್ಳುವುದು ಸರಿಯಲ್ಲ ಎಂದರು. ಈ ವೇಳೆ ಹಿರಿಯ ವಕೀಲ ಪಿ.ಛತ್ರಪ್ಪ, ಉಳಿಗಾಯ ಹನುಮಂತಪ್ಪ, ಚನ್ನಮ್ಮ, ಹನುಮಂತ, ಹೇಮಂತ್ ಇದ್ದರು.