ಹಗರಿಬೊಮ್ಮನಹಳ್ಳಿ: ತಾಲೂಕಿನ ಉಪನಾಯಕನಹಳ್ಳಿ ಗ್ರಾಮದ ಬಳಿ ವಿಷಪೂರಿತ ಬಳ್ಳಿ ತಿಂದು 48 ಕುರಿಗಳು ಸತ್ತಿದ್ದು, ಅವುಗಳ ಮಾಲೀಕರಿಗೆ ಶೀಘ್ರ ಪರಿಹಾರ ವಿತರಿಸಬೇಕೆಂದು ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಉಪತಹಸೀಲ್ದಾರ್ ಅನ್ನದಾನೇಶ್ವರಗೆ ಮನವಿ ಸಲ್ಲಿಸಿದರು. ಸಂಘದ ತಾಲೂಕಾಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಕುರಿಗಾಹಿಗಳು ಗ್ರಾಮದ ಬಳಿಯಿರುವ ಕಬ್ಬಿನಗದ್ದೆಯಲ್ಲಿ ಕುರಿಗಳನ್ನು ಮೇಯಿಸಲು ಹೋದಾಗ ದುರಂತ ಸಂಭವಿಸಿದೆ. ಇದರಿಂದ ಕುರಿಗಾಹಿಗಳಿಗೆ ಅಪಾರ ನಷ್ಟವಾಗಿದೆ. ಬಹುತೇಕ ಗ್ರಾಮಗಳಲ್ಲಿ ಸರ್ಕಾರಿ ಗೋಮಾಳ ಜಾಗ ಸೇರಿ ಹಳ್ಳದ ಜಾಗಳು ಒತ್ತುವರಿಯಾಗಿವೆ. ಕುರಿ ಸೇರಿ ವಿವಿಧ ಜಾನುವಾರುಗಳನ್ನು ಮೇಯಿಸಲು ಜಾಗವೇ ಇಲ್ಲದಂತಾಗಿದೆ. ತಾಲೂಕಾಡಳಿತ ಕೂಡಲೇ ಒತ್ತುವರಿಯಾಗಿರುವ ಗೋಮಾಳ ಜಾಗವನ್ನು ತೆರವುಗೊಳಿಸಬೇಕು. 48 ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳಿಗೆ ತಲಾ 10 ಸಾವಿರ ರೂ. ತುರ್ತು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕುರುಬ ಸಮುದಾಯದ ಮುಖಂಡರಾದ ಬಣಕಾರ ಗೋಣೆಪ್ಪ, ಹುಡೇದ್ ಹುಲುಗಪ್ಪ, ಉಲುವತ್ತಿ ಪ್ರಕಾಶ, ಮಾರುತೇಶ, ಕನ್ನಿಹಳ್ಳಿ ಕೊಟ್ರೇಶ್, ದೇವೇಂದ್ರಪ್ಪ, ಕುಮಾರಪ್ಪ, ಮಧುಸೂಧನ್, ಷಣ್ಮುಖ, ಜಂಬಣ್ಣ, ಮಲ್ಲೇಶ್, ಬೋರ್ವೆಲ್ ದೊಡ್ಡಬಸಪ್ಪ, ದೊಡ್ಡಬಸವರಾಜ, ಬಿ.ಕೆ.ಬಸವರಾಜ್ ಇತರರಿದ್ದರು.