ಹೂವಿನಹಡಗಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರ, ರಸ್ತೆ ಸಾರಿಗೆ ಕಾರ್ಮಿಕರ ಒಡೆದಾಳುವ ಮತ್ತು ಗುಜರಿ ನೀತಿ ವಿರೋಧಿಸಿ ಅ.29ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಂತೋಷ ಹೇಳಿದರು.
ಪಟ್ಟಣದ ಲಾಲ್ ಬಹಾದುರ್ ಶಾಸ್ತ್ರಿ ವೃತ್ತದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಆರಂಭಿಸಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಇದಕ್ಕೂ ಮುಂಚೆಯೇ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟದಿಂದ ಪ್ರತ್ಯೇಕ ನಿರ್ದೇಶನಾಲಯ ತೆರೆದು ಪಕ್ಕದ ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗಿದೆ.
ಆದರೆ ಉಭಯ ಸರ್ಕಾರಗಳು ನಮ್ಮನ್ನು ಕಡೆಗಣಿಸುತ್ತಿವೆ. ಒಂದೇ ನಾಣ್ಯದ ಎರಡು ಮುಖಗಳಿಂತಿರುವ ಕಾಂಗ್ರೆಸ್, ಬಿಜೆಪಿ ರಸ್ತೆ ಸುರಕ್ಷತಾ ಕಾನೂನು ಜಾರಿಗೊಳಿಸುವುದಾಗಿ ಹೇಳಿ ಬರೀ ಶೀರ್ಷಿಕೆ ಮತ್ತು ಪುಟ ತಲೆ ಬರಹವನ್ನು ಬದಲಿಸಿ ಜನರ ದಾರಿ ತಪ್ಪಿಸುತ್ತಿವೆ. ಕೇಂದ್ರ ಸರ್ಕಾರದ ಗುಜರಿ ನೀತಿಯನ್ನು ಒಕ್ಕೂಟ ಖಂಡಿಸುತ್ತದೆ ಎಂದರು.
ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಅನಂತಶಯನ, ಬಸವರಾಜ, ಹೊಸಪೇಟೆ ತಾಲೂಕು ಉಪಾಧ್ಯಕ್ಷ ಹುಸೇನ್, ಹೂವಿನಹಡಗಲಿ ತಾಲೂಕು ಅಧ್ಯಕ್ಷ ಶಂಶುದ್ದೀನ್ ಇತರರಿದ್ದರು.