ಗುಂಡ್ಲುಪೇಟೆ: ಅಧಿಕ ಭಾರ ಹೊತ್ತ ಲಾರಿಗಳ ಸಂಚಾರದಿಂದ ಗ್ರಾಮದ ರಸ್ತೆಗಳು ಹಾಳಾಗುತ್ತಿವೆ ಎಂದು ಆರೋಪಿಸಿ ತಾಲೂಕಿನ ಸೋಮಹಳ್ಳಿ ಗ್ರಾಮಸ್ಥರು ಶುಕ್ರವಾರ ಸಂಜೆ ಕಲ್ಲಿನ ಲಾರಿ ತಡೆದು ಪ್ರತಿಭಟಿಸಿದರು.
ಸುಮಾರು 34 ಟನ್ ತೂಕದ ಕಲ್ಲು ತುಂಬಿದ ಲಾರಿಗಳು ಸಂಜೆಯಿಂದ ಬೆಳಗಿನವರೆಗೂ ಓಡಾಡುತ್ತಿವೆ. ಇದರಿಂದ ಈ ಭಾಗದ ಗ್ರಾಮೀಣ ರಸ್ತೆಗಳು ಬೇಗನೆ ಹಾಳಾಗುತ್ತಿವೆ. ಹಲವೆಡೆ ರಸ್ತೆಗಳಲ್ಲಿ ಡಾಂಬರು ಕಿತ್ತುಬಂದಿದ್ದು ಅಲ್ಲಲ್ಲಿ ಕುಸಿತಕ್ಕೊಳಗಾಗಿವೆ. ಇವುಗಳ ಓಡಾಟ ತಡೆಗಟ್ಟುವಂತೆ ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ ಎಂದು ಲಾರಿ ತಡೆದು ಪ್ರತಿಭಟನೆ ನಡೆಸಿದರು.
ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅನಧಿಕೃತ ಕಲು ್ಲಸಾಗಣೆಯನ್ನು ತಡೆಗಟ್ಟಬೇಕು, ಕೂಡಲೇ ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಲಕ್ಷ್ಮಮ್ಮ ಅವರಿಗೆ ಕರೆ ಮಾಡಿ ಒತ್ತಾಯಿಸಿದರು.
ಗಣಿ ಇಲಾಖೆಯ ಸೂಚನೆ ಮೇರೆಗೆ ಸ್ಥಳಕ್ಕೆ ತೆರಳಿದ ತೆರಕಣಾಂಬಿ ಠಾಣೆ ಪೊಲೀಸರು ಕಲ್ಲು ಸಾಗಣೆಯಲ್ಲಿ ತೊಡಗಿದ್ದ ಟಿಪ್ಪರ್ ವಶಕ್ಕೆ ಪಡೆದುಕೊಂಡರು.