ಕಡೂರು: ಪಟ್ಟಣದಲ್ಲಿ ಸುಸಜ್ಜಿತ ಆಟೋ ನಿಲ್ದಾಣಗಳ ನಿಲ್ದಾಣಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಆಟೋ ನಿಲ್ದಾಣಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ 17 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಬಸವೇಶ್ವರ ವೃತ್ತದ ಸಮೀಪ 4 ಲಕ್ಷ ರೂ. ವೆಚ್ಚದಲ್ಲಿ ವೆಂಕಟೇಶ್ವರ ಆಟೋ ನಿಲ್ದಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಬಸವೇಶ್ವರ ವೃತ್ತದ ಸಮೀಪ ಆಟೋ ನಿಲ್ದಾಣ ನಿರ್ಮಿಸಲು 4 ಲಕ್ಷ ರೂ. ಹಾಗೂ ಕೆಎಸ್ಆರ್ಟಿಸಿ ಮುಂಭಾಗದಲ್ಲಿ ನಿರ್ಮಾಣಗೊಳ್ಳುವ ಆಟೋ ನಿಲ್ದಾಣಕ್ಕೆ 13 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.
ಈ ಪ್ರದೇಶದಲ್ಲಿ ಆಟೋ ನಿಲ್ದಾಣವಾಗಬೇಕು ಎಂಬುದು ಬಹುದಿನಗಳ ಬೇಡಿಕೆ. ನೆನಗುದ್ದಿಗೆ ಬಿದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೆಲ ಶ್ರೀಮಂತರು ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ನಮ್ಮದೇ ಎಂಬಂತೆ ವರ್ತಿಸುತ್ತಿದ್ದಾರೆ. ಹಲವು ಭಾಗಗಳಲ್ಲಿ ರಸ್ತೆಗಳಲ್ಲೇ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಪುರಸಭೆ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಶ್ರಮಿಕರಾಗಿ ಕಾರ್ಯನಿರ್ವಹಿಸುವ ಆಟೋ ಚಾಲಕರಿಗೆ ಸುಸಜ್ಜಿತ ನಿಲ್ದಾಣದ ಅಗತ್ಯವಿದೆ. ಮಾಜಿ ಶಾಸಕ ವೈಎಸ್ವಿ ದತ್ತ ಅವರು ಕೂಡ ಅನುದಾನ ಒದಗಿಸಿ ನಿಲ್ದಾಣಗಳ ಸ್ಥಾಪನೆಗೆ ಸಹಕರಿಸಿದ್ದರು. ಆದರೆ ಚೆಕ್ಪೋಸ್ಟ್ ಬಳಿಯಲ್ಲಿ ನಿರ್ಮಾಣವಾಗಬೇಕಿದ್ದ ನಿಲ್ದಾಣ ಕಾರಣಾಂತರಗಳಿಂದ ನೆನಗುದ್ದಿಗೆ ಬಿದ್ದಿತ್ತು. ಇದೀಗ ಶಾಸಕ ಆನಂದ್ 4 ಲಕ್ಷ ಅನುದಾನ ನೀಡುವ ಮೂಲಕ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಪುರಸಭೆ ಸದಸ್ಯರಾದ ಶ್ರೀಕಾಂತ್, ಮರುಗುದ್ದಿ ಮನು, ಕುರುಬ ಸಮಾಜದ ಅಧ್ಯಕ್ಷ ಭೋಗಪ್ಪ, ಆಸಂಧಿ ಕಲ್ಲೇಶ್, ಕೋಟೆ ನಂದೀಶ್, ರವಿ, ಬಂಜಾರ ಸಮಾಜದ ಅಧ್ಯಕ್ಷ ಕುಮಾರನಾಯ್ಕ, ಕೆಆರ್ಡಿಐಎಲ್ ನಿಗಮದ ಎಇಇ ಅಶ್ವಿನಿ, ಗಿರೀಶ್ ಹಾಗೂ ಆಟೋ ಚಾಲಕರು ಸಂಘದ ಪದಾಧಿಕಾರಿಗಳು ಇದ್ದರು.