ಸಿಂಧನೂರು: ಸುಲ್ತಾನಪುರ ಗ್ರಾಮದ ಹತ್ತಿರ ಇರುವ ಸರ್ಕಾರದ ಹೆಚ್ಚುವರಿ ಜಮೀನನ್ನು ಬಡವರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ತಹಸಿಲ್ ಕಚೇರಿ ಎದುರು ಸಿಪಿಐ(ಎಂ.ಎಲ್)ರೆಡ್ಸ್ಟಾರ್, ಕರ್ನಾಟಕ ರೈತ ಸಂಘದಿಂದ ಸೋಮವಾರ ಧರಣಿ ನಡೆಸಲಾಯಿತು.
ಜವಳಗೇರಾ ನಾಡಗೌಡರ 4900 ಎಕರೆ ಜಮೀನಿನ ಪೈಕಿ ಹೆಚ್ಚುವರಿ ಭೂಮಿಯನ್ನು ನಿಯಮಬದ್ಧವಾಗಿ ಹಂಚಿಕೆ ಮಾಡಿಲ್ಲ. ಬಡ ಜನರಿಗೆ ಜಮೀನು ನೀಡದೆ, ಮಾಲೀಕರಿಗೆ ನೀಡಲು ಸರ್ಕಾರ ಮುಂದಾಗಿದೆ. ದುರ್ಬಲರಿಗೆ ನ್ಯಾಯ ದೊರಕಿಸಲು ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಜವಳಗೇರಾದಲ್ಲಿ ಭೂರಹಿತ ಕೃಷಿ ಕಾರ್ಮಿಕರು ಮಾಡುತ್ತಿರುವ ಹೆಚ್ಚುವರಿ ಜಮೀನಿನ ಸಾಗುವಳಿಗೆ ರಕ್ಷಣೆ ನೀಡಬೇಕು. ಜಿಲ್ಲೆಯಾದ್ಯಂತ ರುವ ಹೆಚ್ಚುವರಿ ಜಮೀನನ್ನು ಫಲಾನುಭವಿಗಳಿಗೆ ನೀಡಬೇಕು. ಭೂನ್ಯಾಯ ಮಂಡಳಿ ಶೀಘ್ರ ರಚನೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಹಂಚಿಕೆಗೆ ಲಭ್ಯವಿರುವ ಜಮೀನಿನ ವಿವರವನ್ನು ಪ್ರತಿ ವರ್ಷ ಜೂನ್ನಲ್ಲಿ ತಹಸಿಲ್ ಕಚೇರಿ ಮೂಲಕ ಕಡ್ಡಾಯವಾಗಿ ಪ್ರಕಟಿಸಬೇಕು. 64.29 ಎಕರೆ ಹೆಚ್ಚುವರಿ ಜಮೀನಿನಲ್ಲಿ ಭೂ ರಹಿರತರು ಒಂದು ತಿಂಗಳಿಂದ ಧರಣಿ ನಡೆಸುತ್ತಿದ್ದು, ಸರ್ಕಾರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಚಿನ್ನಪ್ಪ ಕೊಟ್ರಗಿ, ರಾಮಣ್ಣ, ಬಾಷಾ, ಎಚ್.ಆರ್.ಹೊಸಮನಿ, ಹನುಮಂತಪ್ಪ ಗೋಡ್ಯಾಳ, ಜಗದೀಶ್ವರಿ, ಈರಮ್ಮ, ಗಂಗಮ್ಮ, ಚೈತ್ರಾ, ಉಷಾ, ಎಂ.ಜಿ.ಪರಶುರಾಮ, ಮುದಿಯಪ್ಪ, ಲಕ್ಷ್ಮೀ ಪೂಜಾರ, ದೇವಮ್ಮ ಇತರರು ಇದ್ದರು.