ರಾಮದುರ್ಗ: ಸಕ್ಕರೆ ಕಾರ್ಖಾನೆ ಪ್ರಾರಂಭವಾದ ಸಂದರ್ಭದಲ್ಲಿ ಪ್ರತಿದಿನ ನೂರಾರು ಟ್ರ್ಯಾಕ್ಟರ್ಗಳು ಕಿಲ್ಲಾ ತೋರಗಲ್ಲ ಹಾಗೂ ಕಟಕೋಳ ಮಾರ್ಗವಾಗಿ ಸಂಚರಿಸುವ ಕಾರಣ ಗುಡ್ಡದ ಇಕ್ಕಟ್ಟಾದ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಗುಡ್ಡ ಒಡೆಯುವುದರೊಂದಿಗೆ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.
ತಾಲೂಕಿನ ಯರಗಟ್ಟಿಯಿಂದ ಮುಧೋಳಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಸಿಆರ್ಎಫ್ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ಕಿಲ್ಲಾ ತೋರಗಲ್ಲ ಹತ್ತಿರ ಅಪಘಾತ ವಲಯ ಸುಧಾರಣೆ, 15 ಲಕ್ಷ ರೂ. ವೆಚ್ಚದಲ್ಲಿ ಶೆಟ್ಟೆಮ್ಮನಮರ ದೇವಸ್ಥಾನಕ್ಕೆ ನದಿ ಪ್ರವಾಹ ಸುರಕ್ಷತೆಗೆ ತಡೆಗೋಡೆ ನಿರ್ಮಾಣ ಹಾಗೂ ಅಡುಗೆ ಕೋಣೆ ನಿರ್ಮಾಣ, 3 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಮುದೇನೂರ ಹನುಮಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ ಹಾಗೂ ಬ್ರಿಡ್ಜ್ ನಿರ್ಮಾಣ, ಮುದೇನೂರ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಹಾಗೂ ಕಿರಿಯ ಪ್ರಾಥಮಿಕ ಶಾಲೆಗೆ 11 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಲ್ಮಡ ಜನತೆಯ ಬಹುದಿನಗಳ ಬೇಡಿಕೆಯಾದ ಬ್ರಿಡ್ಜ್ ನಿರ್ಮಾಣ, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದಿಂದ ಅಗತ್ಯ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು. ಕಿಲ್ಲಾ ತೋರಗಲ್ಲ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಕಲ್ಮಡ ಮಠದ ಶ್ರೀಗಳು, ಜಿಪಂ ಸದಸ್ಯರಾದ ಮಾರುತಿ ತುಪ್ಪದ, ರೇಣಪ್ಪ ಸೋಮಗೊಂಡ, ಎಪಿಎಂಸಿ ಉಪಾಧ್ಯಕ್ಷ ಪ್ರಕಾಶ ಬರದೇಲಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಜಾನಪ್ಪ ಹಕಾಟಿ, ಬಸಲಿಂಗಪ್ಪ ಹರಗುಟಕಿ, ನ್ಯಾಯವಾದಿ ಮೋಹನ್ ಸೂರಿ, ಲೋಕೋಪಯೋಗಿ ಇಲಾಖೆ ಎಇಇ ಆರ್.ಝಡ್. ಸೊಲ್ಲಾಪುರೆ, ಇಂಜಿನಿಯರ್ ರವಿಕುಮಾರ, ಬಸಪ್ಪ ಕುರಕೋಟಿ, ಇಂಜಿನಿಯರ್ ವಿಜಯಕುಮಾರ, ಬಿ.ಎಂ. ಪಾಟೀಲ, ಸಿ.ಕೆ. ಒಂಟಗೋಡಿ, ಮೈಲಾರ ಬಸಿಡೋಣಿ, ಮಲ್ಲು ಬಸಿಡೋಣಿ ಇತರರಿದ್ದರು.