More

    ಒಂದೇ ಪೋರ್ಟಲ್​ನಲ್ಲಿ ಸರ್ಕಾರಿ ಸಾಲ ಯೋಜನೆ ಮಾಹಿತಿ: ಜನಸಮರ್ಥಕ್ಕೆ ಪ್ರಧಾನಿ ಚಾಲನೆ, ಹೊಸ ನಾಣ್ಯಗಳ ಬಿಡುಗಡೆ..

    ನವದೆಹಲಿ: ಸಾಲಕ್ಕೆ ಜೋಡಿಸಲಾದ (ಕ್ರೆಡಿಟ್ ಲಿಂಕ್ಡ್) 12 ಸರ್ಕಾರಿ ಯೋಜನೆಗಳನ್ನು ಒಂದೇ ವೇದಿಕೆಯಡಿ ತರುವ ಜನಸಮರ್ಥ ಪೋರ್ಟಲ್​ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. ದೇಶೀಯ ಬ್ಯಾಂಕ್​ಗಳು ಮತ್ತು ಕರೆನ್ಸಿಯನ್ನು ಅಂತಾರಾಷ್ಟ್ರೀಯ ಸರಬರಾಜು ಸರಪಣಿ ಮತ್ತು ವಾಣಿಜ್ಯದ ಪ್ರಮುಖ ಭಾಗವಾಗಿ ಮಾಡಲು ಗಮನ ಹರಿಸುವುದು ಅಗತ್ಯ ಎಂದು ಅವರು ಹೇಳಿದರು. ‘ಆಜಾದಿ ಕಾ ಅಮೃತ ಮಹೋತ್ಸವ್’ (ಎಕೆಎಎಂ) ಭಾಗವಾಗಿ ಹಣಕಾಸು ಮತ್ತು ಕಾರ್ಪೆರೇಟ್ ಸಚಿವಾಲಯ ವಿಜ್ಞಾನ ಭವನದಲ್ಲಿ ಜೂನ್ 6ರಿಂದ 11ರ ವರೆಗೆ ವ್ಯವಸ್ಥೆಗೊಳಿಸಿರುವ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೋದಿ, ನಾಣ್ಯಗಳ ಹೊಸ ಸರಣಿಯನ್ನು ಬಿಡುಗಡೆ ಮಾಡಿದರು.

    ಹಣಕಾಸು ಒಳಗೊಳಿಸುವಿಕೆ ಕುರಿತು ಭಾರತ ಅನೇಕ ವೇದಿಕೆಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳ ಗರಿಷ್ಠ ಬಳಕೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಈ ಹಣಕಾಸು ಒಳಗೊಳ್ಳುವಿಕೆ ಪರಿಹಾರಗಳನ್ನು ಜಾಗತಿಕವಾಗಿ ವಿಸ್ತರಿಸುವ ಪ್ರಯತ್ನ ಮಾಡಬೇಕಿದೆ ಎಂದರು.

    12 ಯೋಜನೆಗಳು: ಜನಸಮರ್ಥ ಪೋರ್ಟಲ್​ನಲ್ಲಿ 12 ಸರ್ಕಾರಿ ಯೋಜನೆಗಳು ಪ್ರದರ್ಶಿತ ವಾಗುತ್ತವೆ. ಸರ್ಕಾರಿ ಕಾರ್ಯಕ್ರಮದ ಪ್ರಯೋಜನ ಪಡೆಯಲು ಜನರು ಪದೆ ಪದೇ ಒಂದೇ ಪ್ರಶ್ನೆಯನ್ನು ಕೇಳುವ ಅಗತ್ಯವನ್ನು ಇದು ನಿವಾರಿಸುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಯಕ್ರಮದಲ್ಲಿ ಹೇಳಿದರು.

    ಏನಿದು ಪೋರ್ಟಲ್?: ಜನಸಮರ್ಥ ಪೋರ್ಟಲ್ ಎಂಡ್ ಟು ಎಂಡ್ ಡೆಲಿವರಿ ವೇದಿಕೆಯಾಗಿದೆ. ಪ್ರಕ್ರಿಯೆ ಸುಗಮವಾಗುವುದರಿಂದ ಹೆಚ್ಚು ಜನರು ಸಾಲ ಪಡೆಯಲು ಮುಂದೆ ಬರಲಿದ್ದಾರೆ. ಈ ಪೋರ್ಟಲ್ ಜನರು ಕಚೇರಿಗಳಿಗೆ ಅಲೆಯುವ ಸಮಯವನ್ನು ಕಡಿಮೆ ಮಾಡುತ್ತದೆ ಹಾಗೂ ಫಲಾನುಭವಿಗಳಿಗೆ ಸುಗಮವಾಗಿ ಸಾಲ ಮಂಜೂರು ಮಾಡಲು ನೆರವಾಗುತ್ತದೆ ಎಂದು ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ನಿರ್ದೇಶಕ ಎ.ಕೆ. ದಾಸ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಯೋಜನೆಗಳನ್ನು ಈ ಪೋರ್ಟಲ್ ವ್ಯಾಪ್ತಿಗೆ ತರಬಹುದಾಗಿದೆ ಎಂದರು.

    ಜನರ ಬಳಿಗೆ ಆಡಳಿತ: ಈ ಹಿಂದೆ ಯೋಜನೆಗಳ ಲಾಭ ಪಡೆಯಲು ಜನರು ಸರ್ಕಾರದ ಬಳಿ ಹೋಗಬೇಕಿತ್ತು. ಆದರೆ ಈಗ ಜನರು ಸಚಿವಾಲಯಗಳ ಕಂಬ ಸುತ್ತುವುದನ್ನು ಹಾಗೂ ವೆಬ್​ಸೈಟ್​ಗಳಿಗೆ ಭೇಟಿ ಕೊಡುವುದನ್ನು ನಿವಾರಿಸಲು ಒತ್ತು ನೀಡಲಾಗುತ್ತಿದೆ. ಜನಸಮರ್ಥ ಪೋರ್ಟಲ್ ವಿದ್ಯಾರ್ಥಿಗಳು, ರೈತರು, ವರ್ತಕರು ಮತ್ತು ಎಂಎಸ್​ಎಂಇ ಉದ್ಯಮಿಗಳ ಜೀವನವನ್ನು ಸುಧಾರಿಸಲಿದೆ ಹಾಗೂ ಅವರ ಕನಸನ್ನು ನನಸು ಮಾಡಲು ನೆರವಾಗಲಿದೆ ಎಂದು ಪ್ರಧಾನಿ ಹೇಳಿದರು.

    ಹೊಸ ನಾಣ್ಯ ಚಲಾವಣೆಗೆ: ಒಂದು, ಎರಡು, ಐದು, ಹತ್ತು ಮತ್ತು ಇಪ್ಪತ್ತು ರೂ. ಮುಖಬೆಲೆಯ ನಾಣ್ಯಗಳ ವಿಶೇಷ ಸರಣಿಯನ್ನು ಸಮಾರಂಭದಲ್ಲಿ ಮೋದಿ ಬಿಡುಗಡೆ ಮಾಡಿದರು. ಈ ನಾಣ್ಯಗಳಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ್’ ವಿನ್ಯಾಸವಿರುತ್ತದೆ. ಇವು ಸ್ಮಾರಕ ನಾಣ್ಯಗಳಾಗಿ ಮಾತ್ರವೇ ಉಳಿಯುವುದಿಲ್ಲ. ಸಾರ್ವಜನಿಕ ಚಲಾವಣೆಗೂ ಬರಲಿದೆ. ಈ ನಾಣ್ಯಗಳು ‘ಅಮೃತ ಕಾಲ’ದ ಗುರಿಯನ್ನು ನೆನಪಿಸಲಿದ್ದು ದೇಶದ ಅಭಿವೃದ್ಧಿಗಾಗಿ ಜನರನ್ನು ಪ್ರೇರೇಪಿಸಲು ನೆರವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts