ಯಲಬುರ್ಗಾ: ಏಳನೇ ವೇತನ ಆಯೋಗದ ವರದಿ ಹಾಗೂ ಜ್ಯೋತಿ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಪಟ್ಟಣದ ಶಾಸಕರ ಕಚೇರಿಯ ಆಪ್ತಸಹಾಯಕ ರಮೇಶ ಮೂಲಕ ಶಾಸಕ ಬಸವರಾಜ ರಾಯರಡ್ಡಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್ ಮಾತನಾಡಿ, 7ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ, ಆದೇಶಿಸಬೇಕು. ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸುವ ಜತೆಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಬೇಕು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು.
ದೇಶದ ನಾನಾ ರಾಜ್ಯಗಳಲ್ಲಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಮುಖ್ಯಮಂತ್ರಿ ಜಾರಿಗೊಳಿಸಬೇಕು. ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳ ಭರ್ತಿ ಹಾಗೂ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗಬೇಕು ಆಗ್ರಹಿಸಿದರು.
ನೌಕರರಾದ ಬಾಲದಂಡಪ್ಪ ತಳವಾರ, ಮಂಜುನಾಥ ಮುರಡಿ, ಶೇಖರಗೌಡ ಪಾಟೀಲ, ಮಂಜುನಾಥ ಮೇಟಿ, ಬಸವನಗೌಡ ರಾಮಶೆಟ್ಟಿ, ರೆಹಮಾನ್, ದೇವಪ್ಪ ಮುಗಳಿ, ಸಮೀರಕುಮಾರ, ಬಸವರಾಜ ಹಳ್ಳಿ, ದೇವಪ್ಪ ಹಾದಿಮನಿ, ಚಂದ್ರಶೇಖರ ಅಣ್ಣಿಗೇರಿ, ಅಶೋಕ ಮಾಲಿಪಾಟೀಲ, ವೆಂಕಟೇಶ ಕೊಂಡಗುರಿ ಇದ್ದರು.