ಹೂವಿನಹಡಗಲಿ: ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ವಿಲೀನ ಹಾಗೂ ಸಿಬ್ಬಂದಿಗೆ ಸರ್ಕಾರಿ ನೌಕರರ ಎಲ್ಲ ಸೌಲಭ್ಯ ನೀಡುವಂತೆ ಒತ್ತಾಯಿಸಿ ಶನಿವಾರ ಸಾರಿಗೆ ನೌಕರರು ಡಿಪೋದಿಂದ ತಹಸಿಲ್ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ ತಹಸೀಲ್ದಾರ್ ಕೆ.ರಾಘವೇಂದ್ರರಾವ್ಗೆ ಮನವಿ ಸಲ್ಲಿಸಿದರು.
ಜಾಥಾ ಬೆಂಬಲಿಸಿ ಮಾತನಾಡಿದ ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ, ಆಂಧ್ರಪ್ರದೇಶದ ಮಾದರಿಯಂತೆ ರಾಜ್ಯದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಸಂಕಷ್ಟದಲ್ಲಿರುವ ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.
ಕೂಡ್ಲಿಗಿಯ ನಿರ್ವಾಹಕ ಮಹಾಂತೇಶ ಮಾತನಾಡಿ, ಪ್ರತಿದಿನ ಸಾರ್ವಜನಿಕರ ಸೇವೆ ಮಾಡುತ್ತಿದ್ದೇವೆ. ನಮ್ಮಂತಹ ಸಾವಿರಾರು ನೌಕರರ ಕುಟುಂಬಗಳಿಗೆ ರಾಜ್ಯ ಸರ್ಕಾರ ಆಸರೆಯಾಗಬೇಕು. ಅದಕ್ಕಾಗಿ ನಮ್ಮನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು. ಒಕ್ಕೂಟದ ಕಾರ್ಯದರ್ಶಿ ತಿಪ್ಪೇಸ್ವಾಮಿ, ನೌಕರರಾದ ಬಸವರಾಜ್, ಶಾಂತರಾಜ್, ಪ್ರವೀಣ, ನಾಗರಾಜ ದೇವರಮನಿ., ಚಿದಾನಂದ, ಹೇಮಕ್ಕ ಇತರರಿದ್ದರು.