ತಿರುವನಂತಪುರಂ : ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೆಲವು ಸಚಿವರ ಹೆಸರು ಕೇಳಿ ಬಂದಿದ್ದ ಚಿನ್ನದ ಕಳ್ಳಸಾಗಣೆ ಕುರಿತಾದ ಪ್ರಕರಣದ ತನಿಖೆ ನಡೆಸುತ್ತಿರುವ ಇಬ್ಬರು ಎನ್ಫೋರ್ಸ್ಮೆಂಟ್ ಡೈರೆಕ್ಟೊರೇಟ್(ಇಡಿ)ನ ಅಧಿಕಾರಿಗಳ ಮೇಲೆ ಕೇರಳ ಪೊಲೀಸ್ ದಾಖಲಿಸಿದ್ದ ಎಫ್.ಐ.ಆರ್.ಗಳನ್ನು ಕೇರಳ ಹೈಕೋರ್ಟ್ ರದ್ದುಪಡಿಸಿದೆ.
ಚಿನ್ನದ ಕಳ್ಳಸಾಗಣೆ ಕೇಸಿನ ಆರೋಪಿಗಳಾದ ಸ್ವಪ್ನ ಸುರೇಶ್ ಮತ್ತು ಸಂದೀಪ್ ನೈಯರ್ ಎಂಬುವರು ಸಿಎಂ ಪಿಣರಾಯಿ ವಿಜಯನ್ ಮತ್ತು ಇತರರ ಹೆಸರನ್ನು ಹೇಳಲು ತಮ್ಮ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದ್ದರು. ಈ ಆರೋಪದ ಆಧಾರದ ಮೇಲೆ ಇಡಿ ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರು ಕಳೆದ ಮಾರ್ಚ್ ತಿಂಗಳಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ್ದರು.
ಇದನ್ನೂ ಓದಿ: 2ನೇ ಬಾರಿ ಮಾಸ್ಕ್ ಉಲ್ಲಂಘಿಸಿದ್ರೆ 10 ಸಾವಿರ ರೂ. ದಂಡ: ಭಾನುವಾರ ಲಾಕ್ಡೌನ್ ಘೋಷಣೆ
‘ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಚಿನ್ನದ ಕಳ್ಳ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಮಾನಿ ಲಾಂಡರಿಂಗ್ ತಡೆ ಕಾಯ್ದೆಯಡಿ ನಡೆಸುತ್ತಿರುವ ತನಿಖೆಯನ್ನು ದಾರಿ ತಪ್ಪಿಸುವುದಕ್ಕಾಗಿ ಈ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಇಡಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಜಿ.ಅರುಣ್ ಅವರು, ಇಬ್ಬರು ಅಧಿಕಾರಿಗಳ ಮೇಲೆ ದಾಖಲಿಸಲಾದ ಎರಡು ಎಫ್.ಐ.ಆರ್.ಗಳನ್ನು ರದ್ದುಗೊಳಿಸಿದರು.
ಈ ವಿಷಯವಾಗಿ, ಪೊಲೀಸರು, ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ವಿಶೇಷ ಪಿಎಂಎಲ್ಎ ಕೋರ್ಟ್ಗೆ ಅರ್ಜಿ ಸಲ್ಲಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಅಪರಾಧ ವಿಭಾಗ ಪೊಲೀಸರಿಗೆ ಪ್ರಕರಣಗಳಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನೂ ಪಿಎಂಎಲ್ಎ ಕೋರ್ಟ್ಗೆ ಸೀಲ್ ಮಾಡಿದ ಕವರ್ನಲ್ಲಿರಿಸಿ ಸಲ್ಲಿಸಬೇಕೆಂದು ನಿರ್ದೇಶಿಸಿದೆ. (ಏಜೆನ್ಸೀಸ್)
ಯುಗಾದಿ ಶಾಕ್ : ಅತ್ತೆ-ಮಾವನಿಗೆ ಚೂರಿ ಇರಿದ ಅಳಿಯ ಈಗ ಪೊಲೀಸರ ಅತಿಥಿ !