ಗೊಳಸಂಗಿ: ಆಲಮಟ್ಟಿ ಅಣೆಕಟ್ಟೆ, ಕೂಡಗಿಯ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಸಹಸ್ರಾರು ಎಕರೆ ಜಮೀನು ಕಳೆದುಕೊಂಡ ಜಿಲ್ಲೆಯ ಜನರ ಕೊಡುಗೆ ಸ್ಮರಣೀಯ. ಎನ್ಟಿಪಿಸಿ ಈ ಭಾಗದ ಜನತೆಯ ಪಾಲಿಗೊಂದು ವರದಾನವಾಗಿ ಬಂದಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಕೂಡಗಿ ಗ್ರಾಮದಲ್ಲಿ ಎನ್ಟಿಪಿಸಿಯ ಆರ್ ಆ್ಯಂಡ್ ಆರ್ ಯೋಜನೆಯ 58 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಸೋಮವಾರ ಮಾತನಾಡಿ, ಪ್ರತಿವರ್ಷ ಕೋಟ್ಯಂತರ ರೂ. ಹಣ ಬಾಧಿತ ಐದು ಹಳ್ಳಿಗಳ ಅಭಿವೃದ್ಧಿಗೆ ಸಿಗಲಿದೆ. ಹೀಗಾಗಿ ಈ ಗ್ರಾಮಗಳ ಗ್ರಾಮಸ್ಥರು ಯಾವುದೇ ಸರ್ಕಾರಿ ಯೋಜನೆಗೆ ಕೈ ಚಾಚುವ ಅನಿವಾರ್ಯತೆ ಇಲ್ಲ. ತೋಟಗಾರಿಕೆಗೆ ಹೆಸರುವಾಸಿಯಾದ ತಿಕೋಟಾ ಕ್ಷೇತ್ರವನ್ನು ಹಿಂದಿಕ್ಕಿ ಭವಿಷ್ಯದಲ್ಲಿ ಬಸವನಬಾಗೇವಾಡಿ ಕ್ಷೇತ್ರ ಸಾಧನೆಯ ಗರಿ ಮುಡಿಯಲಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಯರನಾಳ-ಉಕ್ಕಲಿ ಸಂಸ್ಥಾನ ವಿರಕ್ತಮಠದ ಗುರು ಸಂಗನಬಸವ ಶ್ರೀಗಳು ಆಶೀರ್ವಚನ ನೀಡಿದರು. ಬಸವನಬಾಗೇವಾಡಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ, ಎನ್ಟಿಪಿಸಿ ಎಚ್ಆರ್ ವಿಭಾಗದ ಹಿರಿಯ ವ್ಯವಸ್ಥಾಪಕ ವಿ.ಜಯನಾರಾಯಣನ್, ಶಿವಾನಂದ ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ತಾನಾಜಿ ನಾಗರಾಳ ಮಾತನಾಡಿದರು.
ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ಸವಿ ನೆನಪಿಗಾಗಿ ಹಾಗೂ ಸ್ವಚ್ಛ ಭಾರತ ಅಭಿಯಾನ ಯೋಜನೆ ಸಾಕಾರಕ್ಕಾಗಿ ಕೂಡಗಿ ಗ್ರಾಮದ ಪ್ರತಿ ಮನೆ ಮನೆಗೆ ಬಕೆಟ್ ನೀಡಲಾಯಿತು. ಗ್ರಾಪಂ ಅಧ್ಯಕ್ಷ ಹಸನಡೋಂಗ್ರಿ ಕೋಲ್ಹಾರ ಅಧ್ಯಕ್ಷತೆ ವಹಿಸಿದ್ದರು. ಎನ್ಟಿಪಿಸಿ ಕಾರ್ಯಕಾರಿ ನಿರ್ದೇಶಕ ರಾಜ್ಕುಮಾರ್, ಆರ್ ಆ್ಯಂಡ್ ಆರ್ ಸೀನಿಯರ್ ಮ್ಯಾನೇಜರ್ ಎಂ.ಎಚ್. ಮಂಜುನಾಥ, ಎಸ್.ಗೋಪಿ, ತಾಪಂ ಇಒ ಭಾರತಿ ಚಲುವಯ್ಯ, ತಾಪಂ ಸದಸ್ಯರಾದ ಈಶ್ವರ ಜಾಧವ, ಶಿವಾನಂದ ಅಂಗಡಿ, ಗಣ್ಯರಾದ ಸಿ.ಪಿ. ಪಾಟೀಲ, ಸಿದ್ದಪ್ಪ ಮಿಣಜಗಿ, ಅಶೋಕ ಗುಡದಿನ್ನಿ, ಪಿಡಿಒ ಎ.ಎಸ್. ಕೋಟ್ಯಾಳ, ಗ್ರಾಪಂ ಸದಸ್ಯರು ಸೇರಿ ಮತ್ತಿತರರು ಇದ್ದರು.