More

    ಕಲೆ-ಸಂಸ್ಕೃತಿ ಆರಲಾರದ ದೀಪವಿದ್ದಂತೆ

    ಗೊಳಸಂಗಿ: ಪುರಾತನ ಕಾಲದಿಂದಲೂ ನಾಡ ಭವ್ಯ ಪರಂಪರೆಯ ಪ್ರತೀಕವಾಗಿ ಬೆಳಗುತ್ತಿರುವ ಕಲೆ ಮತ್ತು ಸಂಸ್ಕೃತಿ ಎಂದೆಂದಿಗೂ ಆರಲಾರದ ದೀಪವಿದ್ದಂತೆ ಎಂದು ಹುನ್ನೂರ-ಮಧುರಖಂಡಿಯ ಬಸವಜ್ಞಾನ ಗುರುಕುಲದ ಶರಣ ಡಾ. ಈಶ್ವರ ಮಂಟೂರ ಹೇಳಿದರು.
    ಸಮೀಪದ ಕಲಗುರ್ಕಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ 2021ನೇ ಸಾಲಿನ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಹಿಂದಿನ ಕಾಲದಲ್ಲಿದ್ದ ಸಾಮಾಜಿಕ ಸಾಮರಸ್ಯ, ಅವಿಭಕ್ತ ಕುಟುಂಬ ಪದ್ಧತಿ, ಕಲೆ-ಸಂಸ್ಕೃತಿ ಮತ್ತು ಸಂಸ್ಕಾರ ಇಂದು ಕಣ್ಮರೆಯಾಗಿ ಎಲ್ಲವೂ ಈಗ ವ್ಯಾಪಾರೀಕರಣದತ್ತ ಮುಖ ಮಾಡಿರುವುದು ಖೇದಕರ ಸಂಗತಿಯಾಗಿದೆ ಎಂದು ವಿಷಾದಿಸಿದರು.
    ಶಾಸಕ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ-ಸಾಹಿತ್ಯಗಳು ಈ ನಾಡಿನ ಗತವೈಭವ ನೆನಪಿಸುವ ಬಹುದೊಡ್ಡ ಆಸ್ತಿ. ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಅವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಭೆ ಇದ್ದ ಮನುಷ್ಯನನ್ನು ವಿಶ್ವವೇ ಗುರುತಿಸುತ್ತದೆ ಎಂಬ ಮಾತಿಗೆ ಇಂದು ಇಲ್ಲಿ ಪ್ರದರ್ಶನಗೊಳ್ಳುವ ದಕ್ಷಿಣ ಕರ್ನಾಟಕದ ಕೀಲುಗೊಂಬೆಯಾಟ, ಭರತನಾಟ್ಯ, ಯಕ್ಷಗಾನ ನೃತ್ಯಗಳೇ ಜೀವಂತ ಸಾಕ್ಷಿ ಎಂದರು.

    ಶಿವಶರಣೆ ಮುಕ್ತಾ ಭಾರತಿ, ಬಯಲಾಟ ಅಕಾಡೆಮಿ ಸದಸ್ಯ ಸಿದ್ದು ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈರಪ್ಪ ಆಶಾಪೂರ, ಧಾರ್ಮಿಕ ಚಿಂತಕ ಡಾ. ವಿಶ್ವನಾಥ ಹಿರೇಮಠ ಮಾತನಾಡಿದರು.
    ತಾಲೂಕು ಕಸಾಪ ಮಾಜಿ ಅಧ್ಯಕ್ಷ ನಿಂಗಪ್ಪ ಬೊಮ್ಮನಳ್ಳಿ, ಗ್ರಾಪಂ ಸದಸ್ಯರಾದ ಮಲ್ಲಮ್ಮ ಪೂಜಾರಿ, ಮುತ್ತು ಚೌರಿ, ಗೋಪಾಲ ನಿಕ್ಕಂ, ವೀರಭದ್ರಪ್ಪ ದಳವಾಯಿ, ಮಹಾದೇವ ವಾಲಿ, ಮಂಜು ಕಸನಟ್ಟಿ, ಅಕ್ಷಯ ನಾಗ್ರೇಶಿ ಮತ್ತಿತರರಿದ್ದರು.

    ಮನಸೂರೆಗೊಂಡ ಕಲಾಪ್ರದರ್ಶನ

    ಸುಮಾರು ಮೂರು ಗಂಟೆಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳ 15ಕ್ಕೂ ಅಧಿಕ ಕಲಾರೂಪಕಗಳು ವೇದಿಕೆ ಮೇಲೆ ಪ್ರದರ್ಶನಗೊಂಡವು. ಅದರಲ್ಲೂ ಕರಾವಳಿ ಭಾಗದ ಕೀಲುಕುದುರೆಯ ಗೊಂಬೆಯಾಟ, ಭರತನಾಟ್ಯ, ಯಕ್ಷಗಾನ, ಏಕ್ತಾರಿ ಪದ, ಡೊಳ್ಳಿನ ಪದ, ಜಾನಪದ ನೃತ್ಯಗಳು ನೆರೆದಂತ ಜನಮನಸೂರೆಗೊಳಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts