ಬೆಂಗಳೂರು: ರಾಜ್ಯದ ಭಾಷೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಕನ್ನಡಾದರತಿ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕರ್ನಾಟಕ ಸರ್ಕಾರ, ಇದೀಗ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೂ ರಾಜ್ಯ ಸಚಿವರ ಸ್ಥಾನಮಾನವನ್ನು ನೀಡಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರಿಗೆ ಸಮನಾದ ಸ್ಥಾನಮಾನ ನೀಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಕನ್ನಡ ಸಾಹಿತ್ಯ ಪರಿಷತ್ ಸದಸ್ಯರೊಬ್ಬರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿರುವುದು ಇದೇ ಮೊದಲ ಸಲ.
ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಸಾಲುಮರದ ತಿಮ್ಮಕ್ಕ ಅವರಿಗೂ ರಾಜ್ಯ ಸಚಿವರ ಸ್ಥಾನಮಾನವನ್ನು ನೀಡಿ ಗೌರವಿಸಿತ್ತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸರ್ಕಾರ ರಾಜ್ಯ ಸಚಿವರ ಸ್ಥಾನಮಾನ ನೀಡಿದ್ದು ಸಂತೋಷದ ವಿಚಾರ. ಇದು ಪರಿಷತ್ನ ಎಲ್ಲ ಸದಸ್ಯರಿಗೂ ಸಂದ ಗೌರವ.
| ನಾಡೋಜ ಡಾ. ಮಹೇಶ ಜೋಶಿ, ಅಧ್ಯಕ್ಷ, ಕಸಾಪ
ಕಸಾಪ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿರುವುದು ಸ್ವಾಗತಾರ್ಹ. ಕಸಾಪ ಸ್ವಾಯತ್ತ ಸಂಸ್ಥೆ, ವಿಶ್ವದ ಮತದಾರರು ಕಸಾಪ ಅಧ್ಯಕ್ಷರನ್ನು ಆಯ್ಕೆ ಮಾಡುವರು. ಸಾಹಿತ್ಯಕ, ಸಾಂಸ್ಕೃತಿಕ ಮುಖ್ಯಮಂತ್ರಿ ಆಗಿರುವ ಕಾರಣ ಅದಕ್ಕೆ ತಕ್ಕುನಾದ ಸ್ಥಾನಮಾನ ನೀಡಿದ್ದರೆ ಚೆನ್ನಾಗಿತ್ತು.
| ಮನು ಬಳಿಗಾರ, ಮಾಜಿ ಅಧ್ಯಕ್ಷ, ಕಸಾಪ