ಬೆಂಗಳೂರು: ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನಕ್ಕೆ ಇದೀಗ ಕರ್ನಾಟಕವೂ ಅಧಿಕೃತವಾಗಿ ಸೇರಿಕೊಂಡಿದ್ದು, ಸರ್ಕಾರವು ಇಂದು ಈಶ ಔಟ್ರೀಚ್ ಜತೆ ಒಡಂಬಡಿಕೆಗೆ ಸಹಿ ಹಾಕಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಕೆ. ಸುಧಾಕರ್, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಸದ್ಗುರು ಜೊತೆ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು.
ಮಣ್ಣಿನ ಪ್ರಕಾರ, ಅಕ್ಷಾಂಶ ಸ್ಥಾನಗಳು ಮತ್ತು ನಿರ್ದಿಷ್ಟ ರಾಷ್ಟ್ರದ ಕೃಷಿ ಸಂಪ್ರದಾಯಗಳ ಆಧಾರದ ಮೇಲೆ ಸರ್ಕಾರಗಳು ಕಾರ್ಯರೂಪಕ್ಕೆ ತರಬಹುದಾದ ಪ್ರಾಯೋಗಿಕ, ವೈಜ್ಞಾನಿಕ ಪರಿಹಾರಗಳನ್ನು ನೀಡುವ ಮಣ್ಣಿನ ಕಾರ್ಯನೀತಿ ಕೈಪಿಡಿಯನ್ನು ಸಹ ಸದ್ಗುರು ಮುಖ್ಯಮಂತ್ರಿಗೆ ನೀಡಿದರು. ಈ ಅಭಿಯಾನಕ್ಕೆ ಕರ್ನಾಟಕದ ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಸದ್ಗುರು ಅವರ ಪ್ರಯಾಣದ ಬಗ್ಗೆ ಹೇಳುವುದಾದರೆ, ಇದು ಭೂಮಿ ತಾಯಿಯನ್ನು ರಕ್ಷಿಸಿದ ಒಂದು ಅದ್ಭುತ ಕಾರ್ಯ ಎಂಬುದಾಗಿ ಇತಿಹಾಸದಲ್ಲಿ ಬರೆಯಲ್ಪಡುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಈ ಅಭಿಯಾನ ಯಶಸ್ವಿಯಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಅವರು, ಇದು ನಡೆಯದಿದ್ದರೆ ಪ್ರಸ್ತುತ ಪೀಳಿಗೆಯನ್ನು ಭವಿಷ್ಯದ ಪೀಳಿಗೆಗಳ ಆಹಾರವನ್ನು ಕದಿಯುತ್ತಿರುವ ಅಪರಾಧಿಗಳೆಂದು ಕರೆಯಲಾಗುವುದು ಎಂದು ಎಚ್ಚರಿಸಿದರು. ಈ ಭೂಮಿಯ ಮೇಲಿನ ಪ್ರತಿಯೊಬ್ಬ ನಾಗರಿಕ ಮಾತ್ರವಲ್ಲ, ಇದು ನಮ್ಮ ಭವಿಷ್ಯವಾದ ನವಜಾತ ಮಕ್ಕಳಿಗೂ ಮತ್ತು ಮುಂದೆ ಹುಟ್ಟಲಿರುವ ಮಕ್ಕಳಿಗೂ ಯಶಸ್ವಿಯಾಗಬೇಕು ಎಂದರು.
ಒಂದು ಸರ್ಕಾರವಾಗಿ, ನಾವು ಕೇವಲ ಎಂಒಯುಗೆ ಸಹಿ ಹಾಕುವುದಷ್ಟೇ ಅಲ್ಲದೆ, ಮಣ್ಣು ಉಳಿಸಲು ಬೇಕಾದ ಎಲ್ಲ ಕಾರ್ಯಗಳನ್ನೂ ಮಾಡುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಮುಖ್ಯಮಂತ್ರಿಯವರು ಹೇಳಿದರು. ‘ಪರಿಸರ ಬಜೆಟ್’ ರೂಪಿಸಿದ ದೇಶದಲ್ಲೇ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಅದಕ್ಕಾಗಿ 100 ಕೋಟಿ ರೂ. ತೆಗೆದಿರಿಸಲಾಗಿದೆ ಎಂದರು. ಮಣ್ಣಿನಲ್ಲಿ ಜೈವಿಕ ಅಂಶ ಹೆಚ್ಚಿಸಲು ಅಗತ್ಯವಿರುವ ಕ್ರಮಗಳನ್ನು ಪಟ್ಟಿ ಮಾಡಿದ ಅವರು, ಅದಕ್ಕಾಗಿ ಯಾವುದೇ ಕ್ರಿಯಾಯೋಜನೆಗಳ ಮತ್ತು ಅನುಷ್ಠಾನದ ಅಗತ್ಯವಿದ್ದರೂ ತಕ್ಷಣ ಪ್ರಾರಂಭಿಸುತ್ತೇವೆ ಎಂದು ಪುನರುಚ್ಚರಿಸಿದರು.
ತಮ್ಮ ಪ್ರಯಾಣದ ವಿವರಗಳನ್ನು ಹಂಚಿಕೊಂಡ ಸದ್ಗುರು, ಇದು ಕೇವಲ ದೀರ್ಘ ಪ್ರಯಾಣವಲ್ಲ, ಇದು ನಂಬಲಸಾಧ್ಯವಾದಂಥ ಚಟುವಟಿಗಳಿಂದ ಕೂಡಿದೆ. ಯುಕೆ, ಯುರೋಪ್, ಮಧ್ಯ ಏಷ್ಯಾ, ಅರೇಬಿಯಾ, ಆಫ್ರಿಕ ಮತ್ತು ಪ್ರಪಂಚದಾದ್ಯಂತದ ಸ್ವಯಂಸೇವಕರು. ಅದ್ಭುತ ಕೆಲಸ ಮಾಡಿದ್ದಾರೆ. ಭಾರತದ ಬಗ್ಗೆ ನಾನೇನೂ ಹೆಚ್ಚು ಹೇಳಬೇಕಾಗಿಲ್ಲ, ಏಕೆಂದರೆ ನಾವು ಹಾದುಹೋದ ಎಲ್ಲಾ ರಾಜ್ಯಗಳೂ ಮಣ್ಣು ಉಳಿಸಿ ಅಭಿಯಾನದೊಂದಿಗೆ ಎಂಒಯುಗಳಿಗೆ ಸಹಿ ಹಾಕಿವೆ ಎಂದು ಪ್ರಶಂಸಿಸಿದರು. ಇದೀಗ ತಮ್ಮ ಒಬ್ಬಂಟಿ ಬೈಕ್ ಪ್ರಯಾಣದ 27,000 ಕಿ.ಮೀ.ಗಳನ್ನು ಮುಗಿಸಿರುವ ಸದ್ಗುರುಗಳು, ತಮ್ಮ 598ನೇ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 4 ದಿನಗಳ ಹಿಂದೆ ಬಂದ ವರದಿಯಂತೆ, ನಾವು ಇದುವರಗೂ 320 ಕೋಟಿ ಜನರನ್ನು ಮುಟ್ಟಿದ್ದೇವೆ. ಇದು ತೋರಿಸುವುದೇನೆಂದರೆ ಜನರು ಪ್ರಜ್ಞಾಶೀಲರು ಮತ್ತು ಸಂವೇದನಾಶೀಲರಾಗಿದ್ದಾರೆ, ಅವಶ್ಯಕತೆ ಇದ್ದಿದ್ದು ಅವರನ್ನು ಸಕ್ರಿಯಗೊಳಿಸುವಲ್ಲಿ ಎಂದರು.
ಅಭಿಯಾನವು ಇವತ್ತಿನ ಅಗತ್ಯ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು ಮತ್ತು ಮಣ್ಣು ತನ್ನ ಫಲವತ್ತತೆ ಕಳೆದುಕೊಳ್ಳುವುದರಿಂದ ಆಹಾರ ಉತ್ಪಾದನೆ ಮತ್ತು ಕುಡಿಯುವ ನೀರಿನ ಕೊರತೆಗೆ ಕಾರಣವಾಗುತ್ತದೆ ಎಂದರು. ಸದ್ಗುರು ಪ್ರಾರಂಭಿಸಿದ ಮಣ್ಣು ಉಳಿಸಿ ಅಭಿಯಾನವು ನಮ್ಮ ಪ್ರಯೋಜನಕ್ಕಾಗಿ ಇರುವ ಒಂದು ಉದಾತ್ತ ಕೆಲಸ. ಎಲ್ಲಾ ನಾಗರಿಕರು ಈ ಅಭಿಯಾನದ ಭಾಗವಾಗಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಎಲ್ಲರನ್ನೂ ಆಗ್ರಹಿಸಿದರು.
ಆರೋಗ್ಯ ಸಚಿವ ಕೆ. ಸುಧಾಕರ್ ಮಣ್ಣು ಉಳಿಸಿ ಅಭಿಯಾನವನ್ನು ಪ್ರಾರಂಭಿಸಿದ ಸದ್ಗುರುಗಳ ಬದ್ಧತೆಯನ್ನು ಶ್ಲಾಘಿಸಿದರು ಮತ್ತು ಅವರ ಈ ಪ್ರಯತ್ನವು, ನಮ್ಮ ಹಿಂದಿನ ತಲೆಮಾರಿನವರು ನಮಗೆ ನೀಡಿದ ಶುದ್ಧ ನೀರು ಮತ್ತು ಜೀವಂತ ಮಣ್ಣನ್ನು ಅದೇ ಶುದ್ಧತೆಯಲ್ಲಿ ನಾವು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ತೋರಿಸುತ್ತಿದೆ ಎಂದರು. ಭಾರತದ ಒಬ್ಬರು ಗುರುಗಳು ಮಣ್ಣು ಉಳಿಸಿ ಅಭಿಯಾನದೊಂದಿಗೆ ಇಡೀ ಪ್ರಪಂಚವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ ಅವರು ಈ ಅಭಿಯಾನವನ್ನು ಸೇರಲು ಜನತೆಗೆ ಕರೆ ನೀಡಿದರು.
ನಾವು ಪಂಚಭೂತಗಳನ್ನು ಪೂಜಿಸುತ್ತೇವೆ ಆದರೆ ಅದನ್ನು ಮರೆತುಬಿಟ್ಟಿದ್ದೇವೆ ಮತ್ತು ಸದ್ಗುರುಗಳು ಅದನ್ನು ಪುನಃ ನಮಗೆ ನೆನಪಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಸದ್ಗುರುಗಳ ಸಲಹೆಯಂತೆ ಶಿಕ್ಷಣ ಸಚಿವಾಲಯವು ಶಾಲೆಯ ಪಠ್ಯಕ್ರಮದಲ್ಲಿ ಮಣ್ಣಿನ ಮಹತ್ವವನ್ನು ಸೇರಿಸುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಭಾರತದಲ್ಲಿ ಸುಮಾರು ಶೇ. 30 ಫಲವತ್ತಾದ ಮಣ್ಣು ಈಗಾಗಲೇ ಬಂಜರಾಗಿ ವ್ಯವಸಾಯ ಮಾಡಲು ಅಸಮರ್ಥವಾಗಿದೆ. ಈ ಅಭಿಯಾನದ ಪ್ರಾಥಮಿಕ ಉದ್ದೇಶವೆಂದರೆ ತುರ್ತು ಕಾರ್ಯನೀತಿ ಸುಧಾರಣೆಗಳ ಮೂಲಕ ಕೃಷಿ ಮಣ್ಣಿನಲ್ಲಿ ಕನಿಷ್ಠ ಶೇ. 3 ರಿಂದ ಶೇ. 6 ಜೈವಿಕ ಅಂಶವನ್ನು ಕಡ್ಡಾಯಗೊಳಿಸುವಂತೆ ಪ್ರಪಂಚದ ಎಲ್ಲ ರಾಷ್ಟ್ರಗಳನ್ನು ಆಗ್ರಹಪಡಿಸುವುದು. ಈ ಕನಿಷ್ಠ ಜೈವಿಕ ಅಂಶವಿಲ್ಲದೆ, ಮಣ್ಣಿನ ವಿಜ್ಞಾನಿಗಳು ಮಣ್ಣಿನ ಸನ್ನಿಹಿತ ಸಾವಿನ ಬಗ್ಗೆ ಎಚ್ಚರಿಸಿದ್ದಾರೆ, ಈ ವಿದ್ಯಮಾನವನ್ನು ‘ಮಣ್ಣಿನ ಅಳಿವು’ ಎಂದವರು ಕರೆಯುತ್ತಿದ್ದಾರೆ.
ಸದ್ಗುರುಗಳು ಭಾರತಕ್ಕೆ ಬಂದ ನಂತರ, ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸರಕಾರಗಳು ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಅಭಿಯಾನದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿವೆ. ನವದೆಹಲಿಯಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸದ್ಗುರುಗಳೊಂದಿಗೆ ಸೇರಿ ಈ ಅಭಿಯಾನದ ಮೌಲ್ಯ ಮತ್ತು ತುರ್ತು ಅಗತ್ಯವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದರು.
100 ದಿನಗಳ 30,000 ಕಿಮೀ ಪ್ರಯಾಣವು ಜೂನ್ 21ರಂದು ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲಿ ಈಶ ಔಟ್ರೀಚ್ ಯೋಜನೆಯಾದ ಕಾವೇರಿ ಕೂಗು, ಕೃಷಿ ಮತ್ತು ಆರ್ಥಿಕ ಸಮೃದ್ಧಿಯನ್ನು ಸಕ್ರಿಯಗೊಳಿಸುವ ಮರ ಬೇಸಾಯದ ಮಾದರಿಯನ್ನು ಜಾರಿಗೆ ತರಲು ರೈತರನ್ನು ಸಶಕ್ತಗೊಳಿಸಲು ಅವಿರತವಾಗಿ ಶ್ರಮಿಸುತ್ತಿದೆ. ಈ ವರ್ಷದ ಒಂದು ರಾಷ್ಟ್ರಮಟ್ಟದ ಪ್ರಗತಿಯಲ್ಲಿ, 50,000 ಕ್ಕೂ ಹೆಚ್ಚು ರೈತರು ಮರ ಆಧಾರಿತ ಕೃಷಿಗೆ ಬದಲಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರವು ಮರ-ಆಧಾರಿತ ಕೃಷಿಯನ್ನು ಉತ್ತೇಜಿಸಲು ಕಾವೇರಿ ಕೂಗು ಯೋಜನೆಯನ್ನು ಸಮಿತಿಯಲ್ಲಿ ಸೇರಿಸಿಕೊಂಡಿದೆ.