ಶಿವಮೊಗ್ಗ: ಗೋಹತ್ಯೆ ವಿಷಯದಲ್ಲಿ ಉಡಾಫೆ ಮಾತನಾಡುತ್ತಿದ್ದವರ ಆಟಗಳು ಇನ್ಮುಂದೆ ನಡೆಯಲ್ಲ. ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಗೋಹತ್ಯೆ ಮಾಡಲಿ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಚನ್ನಬಸಪ್ಪ ಸವಾಲೆಸೆದರು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಗೋವು ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ಗೋಹತ್ಯೆ ನಿಷೇಧ ಕುರಿತು ಕಾಂಗ್ರೆಸ್ ನಾಯಕರು ಹಿಂದು ಸಮಾಜದ ಭಾವನೆಗೆ ಧಕ್ಕೆ ಆಗುವಂತೆ ನಡೆದುಕೊಂಡಿದ್ದರು. ವಿಧಾನಸೌಧ, ಡಿಸಿ ಕಚೇರಿ ಮುಂಭಾಗದಲ್ಲಿ ಗೋಮಾಂಸ ಸೇವಿಸುತ್ತೇವೆ. ಅದೇನು ಮಾಡಿಕೊಳ್ಳುತ್ತೀರಾ ಎಂದು ಸವಾಲು ಹಾಕಿದ್ದರು. ಆದರೆ ರಾಜ್ಯ ಸರ್ಕಾರ ಗೋಹತ್ಯೆ ನಿಯಂತ್ರಣಕ್ಕೆ ಮಸೂದೆ ಜಾರಿಗೆ ತರುವ ಮೂಲಕ ಕೋಟ್ಯಂತರ ಗೋವು ಪ್ರಿಯರಿಗೆ ಸಂತಸ ತರಿಸಿದೆ ಎಂದರು.
ನಗರ ಅಧ್ಯಕ್ಷ ಜಗದೀಶ್ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದೆಂದು ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಅದರಂತೆ ಪಕ್ಷ ನಡೆದುಕೊಂಡಿದೆ. ಈಗ ಗೋಹತ್ಯೆ ನಿಷೇಧ ಕಾಯ್ದೆಯಾಗಿ ರೂಪುಗೊಂಡಿದೆ. ಮುಂದೆ ಅದರ ಪಾಲನೆ ಅತೀ ಮುಖ್ಯ ಎಂದರು.
ಗೋ ಹಂತಕರನ್ನು ಸನ್ಮಾನಿಸುವ ಸರ್ಕಾರ ಬಿದ್ದು ಹೋಗಿ ಗೋಸಂರಕ್ಷಕರನ್ನು ರಕ್ಷಿಸುವ ಸರ್ಕಾರ ಬಂದಿದೆ. ಹಾಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಶಿವಮೊಗ್ಗಕ್ಕೆ ಆಹ್ವಾನಿಸುತ್ತೇನೆ. ಅವರು ಗೋಪಿ ವೃತ್ತಕ್ಕೆ ಬಂದಿದ್ದೆ ಆದರೆ ಗೋ ಮಾಂಸದ ಬದಲು ಹೂವು ಹಣ್ಣು ನೀಡಲಾಗುವುದು.
| ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ