ಎಲ್ಲೆಲ್ಲೂ ಕರೊನಾ ವೈರಸ್ನದ್ದೇ ಭೀತಿ. ಸೋಂಕು ನಿವಾರಣೆಗೆ ಇನ್ನೂ ಔಷಧವೂ ಇಲ್ಲ, ನಿಯಂತ್ರಣಕ್ಕೆ ಲಸಿಕೆಯೂ ಅಭಿವೃದ್ಧಿಯಾಗಿಲ್ಲ. ಅದೆಷ್ಟೋ ಜನ ವೈದ್ಯರು, ಸಂಶೋಧಕರು ಕರೊನಾ ಗುಣಸ್ವರೂಪ ಪರೀಕ್ಷಿಸಿ ಅದರ ವಿರುದ್ಧ ಹೋರಾಡುವ ಲಸಿಕೆ, ಔಷಧಿ ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಹಾಗೇ ಅಲ್ಲಲ್ಲಿ ಆಯುರ್ವೇದದ ಬಗ್ಗೆಯೂ ಮಾತು ಕೇಳಿಬರುತ್ತಿದೆ. ಹೀಗಿರುವಾಗ…
ಕಳೆದ ವಾರ ಗೋವಾ ಮೂಲದ 55ವರ್ಷದ ಶಿಕ್ಷಕರಿಗೆ ದಿವ್ಯದೃಷ್ಟಿಯಲ್ಲಿ ಒಂದು ಔಷಧಿ ಗೋಚರಿಸಿದೆ..!
ಅಷ್ಟಕ್ಕೂ ಕರೊನಾ ವೈರಸ್ಗೂ..ಗೋವಾ ಶಿಕ್ಷಕನ ಆಧ್ಯಾತ್ಮಿಕ ಕಾಣ್ಮೆಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಆದರೆ ಖಂಡಿತ ಲಿಂಕ್ ಇದೆ. ಈ ವಿಚಿತ್ರ ಸ್ಟೋರಿ ಓದಿ..
ಮಹೇಶ್ ದೇಗ್ವೇಕರ್ ಎಂಬ ಗೋವಾದ ಶಿಕ್ಷಕನಿಗೆ ಕರೊನಾ ವಿರುದ್ಧ ಹೋರಾಡುವ ಔಷಧಿಯೊಂದು ಗೊತ್ತಾಗಿದೆಯಂತೆ. ಅದೂ ಮಹಾರಾಷ್ಟ್ರದ 19ನೇ ಶತಮಾನದ ಹಿಂದು ಗುರು, ಸಂತ ಗಜಾನನ್ ಮಹಾರಾಜ್ ಅವರು ಹೇಳಿಕೊಟ್ಟ ಮದ್ದು. ಮಹಾರಾಜ್ ಅವರು ನನ್ನ ದಿವ್ಯದೃಷ್ಟಿಗೆ ಗೋಚರಿಸಿದ್ದಾರೆ. ಕೊವಿಡ್-19ನ್ನು ಗುಣಪಡಿಸುವ ಆಯುರ್ವೇದಿಕ್ ಫಾರ್ಮುಲಾವನ್ನು ತಿಳಿಸಿದ್ದಾರೆ ಎಂದು ಶಿಕ್ಷಕ ಹೇಳಿಕೊಂಡಿದ್ದಾರೆ.
ಇದು ತಮಾಷೆ ಅಂದುಕೊಳ್ಳಬೇಡಿ. ದೇಗ್ವೇಕರ್ ಅವರು ಕೇಂದ್ರ ಆಯುಷ್ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರನ್ನು ಭೇಟಿ ಮಾಡಿ, ತಮ್ಮ ಆಯುರ್ವೇದಿಕ್ ಸೂತ್ರವನ್ನು ತಿಳಿಸಿದ್ದಾರೆ. ಇದು ಕರೊನಾ ವಿರುದ್ಧ ಹೋರಾಡುವಲ್ಲಿ ತುಂಬ ಪರಿಣಾಮಕಾರಿ ಎಂಬುದನ್ನು ವಿವರಿಸಿದ್ದಾರೆ.
ದೇಗ್ವೇಕರ್ ಅವರಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಅವರು, ಆಯುರ್ವೇದ ಸೂತ್ರದ ಬಗ್ಗೆ ಕೇಂದ್ರ ಆಯುಷ್ ಇಲಾಖೆ ಸಚಿವರು, ತಜ್ಞರೊಂದಿಗೆ ಚರ್ಚಿಸಿ, ಅದನ್ನು ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಕಳಿಸಿಕೊಡಲಾಗುವುದು ಎಂದು ಭರವಸೆ ಕೂಡ ನೀಡಿದ್ದಾರೆ.
ಅಷ್ಟಕ್ಕೂ ಏನಿದು ಔಷಧಿ: ನಾನು ಸಿದ್ಧಪಡಿಸುವ ಔಷಧಿಯಲ್ಲಿ ಕರೊನಾ ವೈರಸ್ ಕೇವಲ ಆರು ದಿನಗಳಲ್ಲಿ ಸಂಪೂರ್ಣ ನಾಶವಾಗುತ್ತದೆ. ಸೋಂಕಿತ ಶೀಘ್ರದಲ್ಲೇ ಗುಣಮುಖನಾಗುತ್ತಾನೆ ಎಂದು ಹೇಳಿರುವ ದೇಗ್ವೇಕರ್ ಅದನ್ನು ತಯಾರಿಸುವ ವಿಧಾನವನ್ನೂ ಹೇಳಿದ್ದಾರೆ.
ನಿಂಬೆ ರಸ ಮತ್ತು ಶುಂಠಿಯ ಮಿಶ್ರಣಕ್ಕೆ ಪುಡಿ ಮಾಡಿದ ಸೋಂಪು ಹಾಕಬೇಕು. ಮತ್ತೆ ಬೆಳ್ಳುಳ್ಳಿ, ಸ್ಥಳೀಯವಾಗಿ ಸಿಗುವ ಕಾಡು ಸೋರೆಕಾಯಿಗಳನ್ನೆಲ್ಲ ಸೇರಿಸಿ ಪುಡಿಪುಡಿ ಮಾಡಬೇಕು. ಇದಕ್ಕೊಂದು ಪದ್ಧತಿ ಇದೆ. ಈ ಔಷಧಿಯಿಂದ ಕೇವಲ ಮೂರೇ ದಿನದಲ್ಲಿ ಫಲಿತಾಂಶ ಕಾಣಬಹುದು. ಆರನೇ ದಿನಕ್ಕೆ ಕರೊನಾ ಸೋಂಕಿತ ವ್ಯಕ್ತಿ ಪೂರ್ತಿಯಾಗಿ ಗುಣಮುಖನಾಗುತ್ತಾನೆ. ಏಳನೇ ದಿನಕ್ಕೆಲ್ಲ ಆತ ಮನೆಗೆ ಹೋಗಬಹುದು ಎಂದು ಶಿಕ್ಷಕ ಮಾಹಿತಿ ನೀಡಿದ್ದಾರೆ.
ಆಯುರ್ವೇದದ ಈ ಔಷಧಿಯನ್ನು ತಿಳಿಸಿಕೊಟ್ಟಿದ್ದು ನನ್ನ ಸುಪ್ತ ಮನಸಿಗೆ ಕಾಣುವ ಗಜಾನನ ಮಹಾರಾಜ್ ಅವರು. ಮಹಾರಾಜ್ ಅವರು ಕಳೆದ ಎಂಟು ವರ್ಷಗಳಿಂದ ಆಗಾಗ ನನ್ನ ಎದುರು ಬರುತ್ತಾರೆ. ನನ್ನೊಳಗಿನ ಆಧ್ಯಾತ್ಮಿಕ ದೃಷ್ಟಿಗೆ ಕಾಣಿಸಿಕೊಳ್ಳುತ್ತಾರೆ. ಹಿಂದೆ ಹಲವು ಆರೋಗ್ಯ ಸಮಸ್ಯೆಗಳಿಗೂ ಅವರು ಹೀಗೇ ಬಂದು ಔಷಧಿ ತಿಳಿಸಿದ್ದರು. ಈಗ ಕೊವಿಡ್-19ನ್ನು ಗುಣಪಡಿಸುವ ಸೂತ್ರವನ್ನೂ ಹೇಳಿಕೊಟ್ಟಿದ್ದಾರೆ ಎಂದಿದ್ದಾರೆ.
ಕಳೆದವಾರ ನನ್ನ ವಿದ್ಯಾರ್ಥಿಗಳು ಹೇಳಿದ್ದರು. ನೀವೊಮ್ಮೆ ಗಜಾನನ ಮಹಾರಾಜ ಅವರ ಬಳಿ ಕರೊನಾ ವೈರಸ್ಗೆ ಔಷಧಿ ಏನು ಎಂದು ಕೇಳಿ ಎಂದಿದ್ದರು. ಅದರಂತೆ ನಾನು ಪ್ರಾರ್ಥನೆ ಮಾಡಿದ್ದೆ. ಆಗ ನನ್ನ ದಿವ್ಯದೃಷ್ಟಿಯಲ್ಲಿ ಗೋಚರಿಸಿದ ಅವರು ಈ ಫಾರ್ಮುಲಾ ಹೇಳಿಕೊಟ್ಟಿದ್ದಾರೆಎಂದು ಮಾಹಿತಿ ನೀಡಿದ್ದಾರೆ.
ದೇಗ್ವೇಕರ್ ತಮ್ಮನ್ನು ಭೇಟಿಯಾಗಿ ಔಷಧಿ ಸೂತ್ರವನ್ನು ಹೇಳಿದ ಬಗ್ಗೆ ಶ್ರೀಪಾದ್ ನಾಯ್ಕ್ ಅವರೂ ಮಾಹಿತಿ ನೀಡಿದ್ದಾರೆ. ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಫಾರ್ಮುಲಾ ಎಂದು ಹೇಳಿದ್ದಾರೆ.
ಶಿಕ್ಷಕ ದೇಗ್ವೇಕರ್ ಅವರು ಉತ್ತರ ಗೋವಾದ ನಾಡೋರಾ ಜಿಲ್ಲೆಯವರು. ಈ ಹಳ್ಳಿ ಶ್ರೀಪಾದ್ ನಾಯ್ಕ್ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇದೆ.
ಗಜಾನನ ಮಹಾರಾಜ ಅವರು ಮಹಾರಾಷ್ಟ್ರದ ಶೇಗಾನ್ನವರು. ವೇದಶಾಸ್ತ್ರ, ಯೋಗಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರು. 8 ಸೆಪ್ಟೆಂಬರ್ 1910 ರಂದು ತೀರಿಕೊಂಡಿದ್ದಾರೆ. (ಏಜೆನ್ಸೀಸ್)
ಲಾಕ್ಡೌನ್ ಸಡಿಲಿಕೆ: ನಾಳೆಯಿಂದ ಯಾವೆಲ್ಲಾ ಚಟುವಟಿಕೆ ಪುನಾರಂಭವಾಗಲಿದೆ?