ಎನ್.ಆರ್.ಪುರ: ಅಂಕ ಗಳಿಸುವ ಜತೆಗೆ ಜೀವನ ಶಿಕ್ಷಣ ವಿದ್ಯಾರ್ಥಿಗಳಿಗೆ ಅಗತ್ಯ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಶಾರದಾ ಪೂಜೆ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬಾಲ್ಯದಲ್ಲಿ ಮನೆಯಲ್ಲಿ ಪಾಲಕರು, ಹಿರಿಯರು ನೀಡುವ ಜೀವನ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು. ಹೆಣ್ಣು ಸಂಸಾರದ ಕಣ್ಣು ಇದ್ದಂತೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿದೆ. ಇಂದು ಭಾರತದ ಪ್ರಥಮ ಪ್ರಜೆ ಮಹಿಳೆಯಾಗಿದ್ದಾರೆ. ಯುವಜನರು ಮೊಬೈಲ್ ದಾಸರಾಗಿ ಬಣ್ಣದ ಪ್ರಪಂಚಕ್ಕೆ ಮಾರು ಹೋಗುತ್ತಿರುವುದು ಸರಿಯಲ್ಲ ಎಂದರು. ಮುಖ್ಯಶಿಕ್ಷಕಿ ಸುಜಾತಾಕುಮಾರಿ, ಜಿನರಾಜೇಂದ್ರ, ಸಹ ಶಿಕ್ಷಕರಾದ ಗುಣಪಾಲ್ ಜೈನ್, ವಿಜಯಕುಮಾರಿ ಇದ್ದರು.