ಕಡೂರು: ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ವೇದಿಕೆ ಸಹಕಾರಿ ಎಂದು ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
ತಾಲೂಕಿನ ಜಿಗಣೇಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಬೀರೂರು ಶೈಕ್ಷಣಿಕ ವಲಯದ ದೊಡ್ಡಪಟ್ಟಣಗೆರೆ ಕ್ಲಸ್ಟರ್ ಮಟ್ಟದ ಸರ್ಕಾರಿ ಹಿರಿಯ-ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಕ್ಕಳಲ್ಲಿ ವಿಶೇಷ ಎನಿಸಬಹುದಾದ ಪ್ರತಿಭೆ ಅಂತರ್ಗತವಾಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಿಗೆ ಓದಿನಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಕ್ರೀಡೆ, ಸಾಂಸ್ಕೃತಿಕ ವಿದ್ಯೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದವರ ದೊಡ್ಡ ಪಟ್ಟಿ ನಮ್ಮ ತಾಲೂಕಿನಲ್ಲಿದೆ. ಅಂತಹವರ ಸಾಲಿಗೆ ಈ ಪ್ರತಿಭೆಗಳೂ ಸೇರುವಂತಹ ಸಾಧನೆ ಮಾಡಬೇಕಿದೆ. ಮಕ್ಕಳಲ್ಲಿನ ಪ್ರತಿಭೆ ಪ್ರಕಾಶನಗೊಂಡು ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಮುಖಂಡ ಜಿಗಣೇಹಳ್ಳಿ ಉಮೇಶ್ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ರಾಜ್ಯಮಟ್ಟದಲ್ಲಿ ನಮ್ಮ ಶಾಲೆಯನ್ನು ಪ್ರತಿನಿಧಿಸುವ ಅವಕಾಶ ದೊರೆಯಬೇಕಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೈರೇಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್, ಪ್ರೇಮ್ ಕುಮಾರ್, ಮುಖ್ಯ ಶಿಕ್ಷಕ ಪರಮೇಶ್ವರ ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಂದ್ರ, ಗ್ರಾಮದ ಗುಡಿಗೌಡರಾದ ರಾಜಪ್ಪ, ಭೈರಪ್ಪ, ಮುಳ್ಳಪ್ಪ, ಎಂ.ಮೈಲಾರಪ್ಪ, ಬಸಪ್ಪ, ಬಿ.ಟಿ.ಅಜ್ಜಯ್ಯ, ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.