ಸಾಗರ: ನಗರದ ರೋಟರಿ ಸಂಸ್ಥೆ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಮತ್ತವರ ತಂಡ ಮಂಗಳವಾರ ತುರ್ತು ಸಂದರ್ಭದಲ್ಲಿ ನಾಲ್ಕು ಬಾಟಲ್ ರಕ್ತ ನೀಡುವ ಮೂಲಕ ಮಹಿಳೆಯೊಬ್ಬರ ಪ್ರಾಣ ಉಳಿಸಿದ್ದಾರೆ.
ಮಂಗಳವಾರ ಶಿವಮೊಗ್ಗದಿಂದ ಡಾ. ರಾಜನಂದಿನಿ ಕಾಗೋಡು ಬರುತ್ತಿರುವಾಗ ಸೊರಬ ತಾಲೂಕು ತವನಂದಿ ಗ್ರಾಮದ ಸೀತಮ್ಮ ಪರಶುರಾಮಪ್ಪ ಎಂಬುವವರು ಬಿಳಿ ರಕ್ತ ಕಣದ ಕೊರತೆಯಿಂದ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಿಷಯ ಫೋನ್ ಮೂಲಕ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ. ತುರ್ತಾಗಿ ನಾಲ್ಕು ರಕ್ತದಾನಿಗಳ ಅವಶ್ಯವಿದೆ ಎಂದು ತಿಳಿಸಿದರು. ತಕ್ಷಣ ಡಾ. ರಾಜನಂದಿನಿ ಕಾಗೋಡು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರ ಜತೆ ತಾವೂ ಸೇರಿ ನಾಲ್ಕು ಯೂನಿಟ್ ರಕ್ತವನ್ನು ರೋಟರಿ ರಕ್ತನಿಧಿ ಕೇಂದ್ರಕ್ಕೆ ನೀಡಿ ಮಹಿಳೆಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.