More

    ತಿಥಿ ಕಾರ್ಯ ಮುಗಿದ ನಂತರ ಬಂತು ಶವ, ಕೋವಿಡ್​ ಆಸ್ಪತ್ರೆಯ ಮಹಾ ಯಡವಟ್ಟು!

    ನರೇಗಲ್ಲ(ಗದಗ): ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಮಗನೇ ತನ್ನ ತಾಯಿಯ ಮೃತ ದೇಹದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕರುಣಾಜನಕ ಘಟನೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ನಡೆದಿದೆ. ಅಂದಹಾಗೆ ಇದು ಗದಗ ಜಿಲ್ಲೆಯ ಕೋವಿಡ್​ ಆಸ್ಪತ್ರೆಯ ಸಿಬ್ಬಂದಿಯ ಮಹಾಯಡವಟ್ಟಿನ ಪರಿಣಾಮ.

    ಕೋವಿಡ್​ ಸೋಂಕು ತಗುಲಿ ಚಿಕಿತ್ಸೆ ಫಲಿಸದೆ ವಾರದ ಹಿಂದೆಯೇ ಮೃತಪಟ್ಟಿದ್ದ ತಾಯಿಯ ತಿಥಿ ಕಾರ್ಯ ಮುಗಿಸಿದ ಮಗನಿಗೆ ಗುರುವಾರ(ಜು.30) ಕರೆ ಮಾಡಿದ ವೈದ್ಯರು, ‘ನಿಮ್ಮ ತಾಯಿ ಸಾವನ್ನಪ್ಪಿದ್ದಾರೆ. ಶವ ತೆಗೆದುಕೊಂಡು ಹೋಗಿ’ ಎಂದಿದ್ದು, ಈ ಮೊದಲು ಅಂತ್ಯಕ್ರಿಯ ಮಾಡಿರೋದು ಯಾರ ಶವ ಎಂಬ ಪ್ರಶ್ನೆ ಕುಟುಂಬಸ್ಥರಲ್ಲಿ ಮೂಡಿದೆ.

    ಇದನ್ನೂ ಓದಿರಿ ಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆ

    ಏನೀ ಪ್ರಕರಣ: ನರೇಗಲ್ಲ ಪಟ್ಟಣದ ಕೋಳಿ ಫಾರ್ಮ್ ಹತ್ತಿರದ 70 ವರ್ಷದ ವೃದ್ಧೆಗೆ ಜು. 15ರಂದು ಪಾರ್ಶ್ವವಾಯು ಬಾಧಿಸಿದ ಹಿನ್ನೆಲೆಯಲ್ಲಿ ಗದಗ ಜಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು.18ರಂದು ಕರೊನಾ ತಪಾಸಣೆ ಮಾಡಿದ್ದು, ಜು. 20ರಂದು ಕರೊನಾ ಪಾಸಿಟಿವ್ ವರದಿ ಬಂದಿತ್ತು. 20ರಂದು ಕೋವಿಡ್ ಆಸ್ಪತ್ರೆಗೆ ತೆರಳಿದ ವೃದ್ಧೆಯ ಪುತ್ರ ಪರಸಪ್ಪ ವೀರಪ್ಪ ಗಡ್ಡದ ಅವರಿಗೆ ‘ನಿಮ್ಮ ತಾಯಿ ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರ ಮಾಡಲಾಗಿದೆ’ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ.

    ಆಘಾತಕ್ಕೊಳಗಾದ ವೃದ್ಧೆಯ ಪುತ್ರ ಹೆತ್ತಮ್ಮನ ಅಂತ್ಯಕ್ರಿಯೆಯನ್ನೂ ಮಾಡಲಾಗಲಿಲ್ಲ ಎಂದು ನೊಂದುಕೊಂಡು ಜು.29ರಂದು ತಾಯಿಯ ತಿಥಿ(ಶಿವಗಣಾರಾಧನೆ) ಮಾಡಿದ್ದಾರೆ. ಆದರೆ, ಗುರುವಾರ(ಜು.30) ಬೆಳಗ್ಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮೃತ ವೃದ್ಧೆಯ ಮನೆಗೆ ಬಂದು, ‘ನಿಮ್ಮ ತಾಯಿ ಬುಧವಾರ ರಾತ್ರಿ 12.03ಕ್ಕೆ ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರವನ್ನು ನರೇಗಲ್ಲದ ರುದ್ರಭೂಮಿಯಲ್ಲಿ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಇದರಿಂದ ಮತ್ತೊಮ್ಮೆ ಆಘಾತಕ್ಕೀಡಾದ ಪುತ್ರ ದಿಕ್ಕುತೋಚದೆ ರುದ್ರಭೂಮಿಗೆ ತೆರಳಿದ್ದಾನೆ.

    ಇದನ್ನೂ ಓದಿರಿ ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

    ಆಂಬುಲೆನ್ಸ್ ವಾಹನದಲ್ಲಿ ಬಂದ ಪಾರ್ಥಿವ ಶರೀರವನ್ನು ತೋರಿಸುವಂತೆ ಪುತ್ರ ಪಟ್ಟು ಹಿಡಿದಿದ್ದಾನೆ. ‘ಐದು ದಿನಗಳ ಹಿಂದೆಯೇ ನನ್ನ ತಾಯಿ ಮೃತಪಟ್ಟಿದ್ದಾಳೆ ಎಂದು ನೀವೇ ಹೇಳಿ, ಇವತ್ತು ಯಾರ ಹೆಣವನ್ನು ತಂದು ಹೂಳುತ್ತೀದ್ದಿರಿ? ನನಗೆ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ. ಹೆತ್ತ ತಾಯಿಯ ಮುಖವನ್ನೂ ತೊರಿಸದೆ ಅಂತ್ಯಕ್ರಿಯೆ ಮಾಡುತ್ತಿರುವುದು ಸರಿಯಲ್ಲ’ ಎಂದು ಗೋಗರೆದಿದ್ದಾನೆ. ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಪ.ಪಂ. ಪೌರ ಕಾರ್ಮಿಕರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸಹಾಯದಿಂದ ದ್ಯಾಂಪೂರ ರಸ್ತೆಯಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳದಲ್ಲಿ ಗಜೇಂದ್ರಗಡ ತಹಸೀಲ್ದಾರ್ ಅಶೋಕ ಕಲಘಟಗಿ, ನರೇಗಲ್ಲ ಪಪಂ ಮುಖ್ಯಾಧಿಕಾರಿ ಎಂ.ಎ. ನೂರೂಲ್ಲಾಖಾನ, ಆರೋಗ್ಯ ನಿರೀಕ್ಷಕ ರಾಮಚಂದ್ರಪ್ಪ ಕಜ್ಜಿ, ಡಾ. ರಾಘು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಎಸ್.ಎಫ್. ಅಂಗಡಿ, ಎಸ್.ಎನ್. ಪಾಟೀಲ, ಪೌರ ಕಾರ್ಮಿಕರು, ಪೊಲೀಸ್, ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

    ಇದನ್ನೂ ಓದಿರಿ ಅಧಿಕಾರ, ಹಣಕ್ಕಾಗಿ ಹಲವು ಬಾರಿ ಡಿ.ಕೆ.ಶಿವಕುಮಾರ್​ ನನ್ನ ಕಾಲಿಗೆ ಬಿದ್ದಿದ್ದಾರೆ… ಅದರ ವಿಡಿಯೋ ಇದೆ: ಸಿ.ಪಿ.ಯೋಗೇಶ್ವರ್

    ‘ನನ್ನ ತಾಯಿ ಸಾವಿನ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಜು.20ರಂದು ಸತ್ತಿರುವುದಾಗಿ ಹೇಳಿ, ಜು.30ರಂದು ಅಂತ್ಯಕ್ರಿಯೆಗೆ ಬರುವಂತೆ ತಿಳಿಸಿದರು. ಆದರೆ, ಅಂತ್ಯಕ್ರಿಯೆ ಸಂದರ್ಭದಲ್ಲಿ ನನ್ನ ತಾಯಿಯ ಮುಖವನ್ನೂ ತೋರಿಸಲಿಲ್ಲ. ಅಧಿಕಾರಿಗಳು ನಮಗೆ ಮೋಸ ಮಾಡಿದ್ದಾರೆ. ಸಂಪೂರ್ಣ ಮುಚ್ಚಲಾಗಿದ್ದ ಮೃತ ದೇಹದ ಮೇಲೆ ಕರೊನಾ ಪಾಸಿಟಿವ್ ಇರುವ ಯಾವುದೇ ಗುರುತಿನ ನಂಬರ್ ಕೂಡ ಇರಲಿಲ್ಲ ಎಂದು ಮೃತಳ ಪುತ್ರ ಪರಸಪ್ಪ ವೀರಪ್ಪ ಗಡ್ಡದ ಆರೋಪಿಸಿದ್ದಾರೆ.

    ವೃದ್ಧೆಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಯಾವ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಲಿ. ಜಿಲ್ಲಾಡಳಿತ ವತಿಯಿಂದ ಮಾತ್ರ ಅಧಿಕೃತ ಮಾಹಿತಿ ನೀಡುತ್ತಿದ್ದೇವೆ. ಬೇರೆ ಯಾರೇ ಹೇಳಿದರೂ ನಂಬಬಾರದು. ಅದು ಅಧಿಕೃತವೂ ಅಲ್ಲ. ಈ ಗೊಂದಲದ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

    ಮೃತಳ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರಿಗೆ ಕರೊನಾ ತಪಾಸಣೆ ಮಾಡಲಾಗಿದ್ದು, ಎಲ್ಲರ ವರದಿ ನೆಗಟಿವ್ ಬಂದಿದೆ ಎನ್ನಲಾಗಿದೆ.

    ತಿಥಿಕಾರ್ಯ ಮುಗಿಸಿದ ಬಳಿಕ ಶವ ತೆಗೆದುಕೊಂಡು ಹೋಗಿ ಎಂದ ಗದಗ ಜಿಮ್ಸ್ ಆಸ್ಪತ್ರೆ!#Gadag #GIMSHospital #Sent #Deadbody #AfterCremation

    Posted by Dighvijay News – ದಿಗ್ವಿಜಯ ನ್ಯೂಸ್ on Friday, July 31, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts