ಮೆಲ್ಬೋರ್ನ್: ಅಡಿಲೇಡ್ನಲ್ಲಿ ಮೊದಲ 2 ದಿನ ಮೇಲುಗೈ ಸಾಧಿಸಿದರೂ, 3ನೇ ದಿನ ಆತಿಥೇಯ ಆಸ್ಟ್ರೇಲಿಯಾದ ಮಾರಕ ಬೌಲಿಂಗ್ ದಾಳಿಗೆ ನಾಟಕೀಯ ಪತನ ಕಂಡ ಭಾರತ ತಂಡ ಮೆಲ್ಬೋರ್ನ್ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಸಾಕಷ್ಟು ಬದಲಾವಣೆಗಳನ್ನು ಕಾಣಲಿದೆ. ಆರಂಭಿಕ ಪೃಥ್ವಿ ಷಾ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವೃದ್ಧಿಮಾನ್ ಸಾಹ ಸರಣಿಯ ಉಳಿದ ಪಂದ್ಯಗಳಿಂದ ಕೊಕ್ ಪಡೆಯುವ ಸಾಧ್ಯತೆ ಇದ್ದರೆ, ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯಿಂದ ತವರಿಗೆ ಮರಳಲಿದ್ದಾರೆ. ವೇಗಿ ಮೊಹಮದ್ ಶಮಿ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಶನಿವಾರದಿಂದ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಕನಿಷ್ಠ 4 ಬದಲಾವಣೆ ಕಾಣುವುದು ನಿಶ್ಚಿತವೆನಿಸಿದೆ.
ಇದನ್ನೂ ಓದಿ: ಖೇಲೋ ಇಂಡಿಯಾ ಗೇಮ್ಸ್ಗೆ ಮಲ್ಲಕಂಬ ಸ್ಪರ್ಧೆ ಸೇರ್ಪಡೆ
ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮ ಈಗಾಗಲೆ ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ನಲ್ಲಿದ್ದರೂ, 3ನೇ ಟೆಸ್ಟ್ವರೆಗೆ ಆಡಲು ಲಭ್ಯರಿಲ್ಲ. ಹೀಗಾಗಿ 2ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕನ ಸ್ಥಾನವನ್ನು ಶುಭಮಾನ್ ಗಿಲ್ ತುಂಬುವ ಸಾಧ್ಯತೆ ಇದೆ. ಗಿಲ್ ಈಗಾಗಲೆ ಅಭ್ಯಾಸ ಪಂದ್ಯದಲ್ಲಿ ಕೆಲ ಉತ್ತಮ ಇನಿಂಗ್ಸ್ ಆಡಿದ್ದರೂ, ಮೊದಲ ಟೆಸ್ಟ್ಗೆ ಪೃಥ್ವಿ ಷಾ ಅಚ್ಚರಿಯ ರೀತಿಯಲ್ಲಿ ಆಯ್ಕೆಯಾಗಿದ್ದರು. ಆದರೆ ಅಡಿಲೇಡ್ನಲ್ಲಿ ಎರಡೂ ಇನಿಂಗ್ಸ್ಗಳಲ್ಲಿ ಬ್ಯಾಟ್-ಪ್ಯಾಡ್ ನಡುವೆ ಅಂತರ ನೀಡಿ ಬೌಲ್ಡ್ ಆಗಿರುವ ಪೃಥ್ವಿ ಷಾ ಅವರ ತಾಂತ್ರಿಕ ದೋಷ ಇದೀಗ ಜಗಜ್ಜಾಹೀರಾಗಿದೆ.
ವೃದ್ಧಿಮಾನ್ ಸಾಹ ಕೀಪಿಂಗ್ನಲ್ಲಿ ಯಾವುದೇ ಲೋಪವಿಲ್ಲದಿದ್ದರೂ, ಭಾರತ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬುವ ನಿಟ್ಟಿನಲ್ಲಿ 2ನೇ ಟೆಸ್ಟ್ನಲ್ಲಿ ರಿಷಭ್ ಪಂತ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಪಂತ್ ಅಹರ್ನಿಶಿ ಅಭ್ಯಾಸ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸಿ ಮಿಂಚಿದ್ದರೂ, ಮೊದಲ ಟೆಸ್ಟ್ನಲ್ಲಿ ಅನುಭವದ ಆಧಾರದಲ್ಲಿ ಸಾಹಗೆ ಮಣೆ ಹಾಕಲಾಗಿತ್ತು. ಆದರೆ ಭಾರತ ತಂಡ ತನ್ನ ಆಯ್ಕೆ ಎಡವಟ್ಟನ್ನು ತಿದ್ದಿಕೊಂಡು ರಿಷಭ್ ಪಂತ್ಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಕೊನೇ 3 ಟೆಸ್ಟ್ಗಳಲ್ಲಿ ರಿಷಭ್ ಪಂತ್ ಗಮನ ಸೆಳೆದರೆ, ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲೂ ಅವರು ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ: ದ್ರಾವಿಡ್ ಅವರನ್ನು ಕೂಡಲೆ ಆಸ್ಟ್ರೇಲಿಯಾಕ್ಕೆ ಕಳುಹಿಸಿ ಎಂದು ವೆಂಗ್ಸರ್ಕಾರ್ ಹೇಳಿದ್ದೇಕೆ?
ಕೊಹ್ಲಿ ಸ್ಥಾನಕ್ಕೆ ರಾಹುಲ್
ಭರ್ಜರಿ ಫಾರ್ಮ್ನಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಮೊದಲ ಟೆಸ್ಟ್ನಲ್ಲಿ ಆಡದಿರುವುದೇ ಅಭಿಮಾನಿಗಳಿಗೆ ದೊಡ್ಡ ಅಚ್ಚರಿಯಾಗಿತ್ತು. ಇದೀಗ 2ನೇ ಟೆಸ್ಟ್ನಿಂದ ವಿರಾಟ್ ಕೊಹ್ಲಿ ಗೈರಾಗಿರುವುದರಿಂದ ಅವರ ಸ್ಥಾನವನ್ನು ಕೆಎಲ್ ರಾಹುಲ್ ತುಂಬುವ ನಿರೀಕ್ಷೆ ಇದೆ. ರಾಹುಲ್ ಈ ಹಿಂದೆ ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಆಡಿದ್ದರೂ, ಏಕದಿನ ಕ್ರಿಕೆಟ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿಯೂ ಉತ್ತಮ ನಿರ್ವಹಣೆ ತೋರಿರುವುದರಿಂದ, ಟೆಸ್ಟ್ನಲ್ಲೂ ಮಧ್ಯಮ ಕ್ರಮಾಂಕಕ್ಕೆ ನ್ಯಾಯ ಸಲ್ಲಿಸುವ ನಿರೀಕ್ಷೆ ಇದೆ.
ಹನುಮ ವಿಹಾರಿಗೆ ಬ್ಯಾಟಿಂಗ್ ಬಡ್ತಿ?
ವಿರಾಟ್ ಕೊಹ್ಲಿ ಗೈರಿನಲ್ಲಿ ಹನುಮ ವಿಹಾರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ ಅವರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಆಗ ಹನುಮ ವಿಹಾರಿ 5ನೇ ಕ್ರಮಾಂಕಕ್ಕೆ ಬಡ್ತಿ ಪಡೆಯಲಿದ್ದು, ಕೆಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ ಎಂದು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಎಲ್ಲ ಟೆಸ್ಟ್ ಪಂದ್ಯಗಳಲ್ಲಿ ಪಿಂಕ್ ಬಾಲ್ ಬಳಸಿ ಎಂದು ಶೇನ್ ವಾರ್ನ್ ಹೇಳಿದ್ದೇಕೆ?
ಶಮಿ ಜಾಗಕ್ಕೆ ಸಿರಾಜ್?
ಮಣಿಕಟ್ಟು ಗಾಯದಿಂದಾಗಿ ಮೊಹಮದ್ ಶಮಿ ಸರಣಿಯಿಂದ ಹೊರಬಿದ್ದಿದ್ದು, 2ನೇ ಟೆಸ್ಟ್ನಲ್ಲಿ ಅವರ ಸ್ಥಾನವನ್ನು ಯುವ ವೇಗಿ ಮೊಹಮದ್ ಸಿರಾಜ್ ತುಂಬುವ ಸಾಧ್ಯತೆ ಇದೆ. ಮತ್ತೋರ್ವ ವೇಗಿ ನವದೀಪ್ ಸೈನಿ ಕೂಡ ರೇಸ್ನಲ್ಲಿದ್ದರೂ, ಸಿರಾಜ್ 2 ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ದಾಳಿ ಸಂಘಟಿಸಿರುವುದರಿಂದ ಟೆಸ್ಟ್ ಪದಾರ್ಪಣೆಯ ಅವಕಾಶ ಪಡೆಯುವ ನಿರೀಕ್ಷೆ ಇದೆ.
ಸಮರ್ಥ 11ರ ಬಳಗ ಅಗತ್ಯ
ಅಡಿಲೇಡ್ನಲ್ಲಿ ಭಾರತ ತಂಡ ಸೋಲಲು ಆಡುವ ಹನ್ನೊಂದರ ಬಳಗದ ಆಯ್ಕೆಯಲ್ಲಿ ಮಾಡಿರುವ ಎಡವಟ್ಟುಗಳೇ ಪ್ರಮುಖ ಕಾರಣ ಎಂಬುದು ಈಗಾಗಲೆ ಸ್ಪಷ್ಟವಾಗಿದೆ. ಫಾರ್ಮ್ನಲ್ಲಿಲ್ಲದಿದ್ದರೂ ಪೃಥ್ವಿ ಷಾಗೆ ಅವಕಾಶ ಕಲ್ಪಿಸಿದ್ದು, ಕೆಎಲ್ ರಾಹುಲ್ ಉತ್ತಮ ಫಾರ್ಮ್ನಲ್ಲಿದ್ದರೂ ಆಡುವ ಬಳಗದಿಂದ ಹೊರಗಿಟ್ಟಿದ್ದು ಈಗಾಗಲೆ ಸಾಕಷ್ಟು ಟೀಕೆಗೆ ಗುರಿಯಾಗಿರುವ ಆಯ್ಕೆಗಳಾಗಿವೆ. ರಿಷಭ್ ಪಂತ್ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ್ದರೂ, ವೃದ್ಧಿಮಾನ್ ಸಾಹ ಅವರನ್ನು ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು. ಸದ್ಯಕ್ಕೆ ಬೌಲಿಂಗ್ ವಿಭಾಗದ ಆಯ್ಕೆಯಲ್ಲಿ ಮಾತ್ರ ಭಾರತ ತಂಡದ ಮ್ಯಾನೇಜ್ಮೆಂಟ್ ಸ್ಪಷ್ಟತೆ ತೋರಿದೆ. ಆದರೆ ಶಮಿ ಗಾಯದಿಂದಾಗಿ ಇಲ್ಲೂ ಬದಲಾವಣೆ ಅನಿವಾರ್ಯವಾಗಿದೆ.