ಕಡೂರು: ಬೆಳೆಗಳ ರೋಗ ನಿಯಂತ್ರಣಕ್ಕೆ ಸರಿಯಾದ ರೀತಿಯಲ್ಲಿ ಬೀಜೋಪಚಾರ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎ.ಟಿ.ಕೃಷ್ಣಮೂರ್ತಿ ತಿಳಿಸಿದರು.
ಜೋಡಿಲಿಂಗದಹಳ್ಳಿ ಪ್ರಗತಿಪರ ರೈತ ಬೀರೇಗೌಡ ಅವರ ಹೊಲದಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ ರೈತರಿಗೆ ಮಾಹಿತಿ ನೀಡಿ, ರಾಗಿ ಕೊಯ್ಲಿಗೆ ಹಾಗೂ ಒಕ್ಕಣೆಗೆ ಹೆಚ್ಚಿನ ಕೂಲಿ ಆಳುಗಳು ಬೇಕು. ಕೂಲಿ ಆಳುಗಳ ಲಭ್ಯತೆ ಕಡಿಮೆ ಇರುವುದರಿಂದ ಯಾಂತ್ರೀಕೃತ ಕಟಾವಿಗೆ ಸೂಕ್ತ ತಳಿಗಳನ್ನು ಒದಗಿಸಲಾಗಿದೆ. ಜೋಡಿಲಿಂಗದಹಳ್ಳಿ 10 ರೈತರಿಗೆ ಯಾಂತ್ರೀಕೃತ ಕಟಾವಿಗೆ ಅಲ್ಪಾವಧಿಯ, ಅಧಿಕ ಇಳುವರಿ ನೀಡುವ ಹಾಗೂ ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿರುವ ಕೆಎಂಆರ್ 630 ಎಂಬ ಹೊಸ ರಾಗಿ ತಳಿಯ ಬೀಜವನ್ನು ಪೂರೈಕೆ ಮಾಡಲಾಗಿತ್ತು. ಪ್ರಾತ್ಯಕ್ಷಿಕೆ ಫಲಾನುಭವಿ ಬೀರೇಗೌಡ ಅವರು ಹೊಸ ತಳಿಯನ್ನು ಕೃಷಿ ವಿಜ್ಞಾನಿ ಮಾರ್ಗದರ್ಶನದಂತೆ ಬೆಳೆದು ಹೆಚ್ಚಿನ ಇಳುವರಿ ಪಡೆದಿದ್ದಾರೆ. ಅವರಂತೇ ಈ ಭಾಗದ ರೈತರು ಕೃಷಿ ಮಾಡಬೇಕು ಎಂದು ಸಲಹೆ ನೀಡಿದರು.ಪ್ರಗತಿಪರ ರೈತ ಬೀರೇಗೌಡ ಮಾತನಾಡಿ, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ನೀಡಿರುವ ರಾಗಿ ಕೆಎಂಆರ್ 630 ತಳಿ ಉತ್ತಮವಾಗಿದ್ದು ಎಕರೆಗೆ ಸುಮಾರು 13 ಕ್ವಿಂಟಾಲ್ ಇಳುವರಿ ನಿರೀಕ್ಷೆಯಲ್ಲಿದ್ದೇನೆ. ರೈತರು ಇಂಥ ಸುಧಾರಿತ ತಳಿಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬೇಕು ಹಾಗೂ ಕೃಷಿ ವಿಜ್ಞಾನಿಗಳ ಸಲಹೆಯಂತೆ ಕೃಷಿ ಮಾಡಬೇಕು ಎಂದರು.ಸಹಾಯಕ ಕೃಷಿ ನಿರ್ದೇಶಕ ಅಶೋಕ, ಫ್ಕೋ ಸಂಸ್ಥೆ ಮಾರುಕಟ್ಟೆ ಅಧಿಕಾರಿ ಪಿ.ಅಥಾವುಲ್ಲಾ, ಸಖರಾಯಪಟ್ಟಣ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆದಂತ, ಜೀವನ್ ತಾಂತ್ರಿಕ ವ್ಯವಸ್ಥಪಕಿ ಶುಭಾ, ಸೋಮಶೇಖರ್ ಇದ್ದರು.