ಕಾರವಾರ: ಗೃಹ ಬಳಕೆಯ 14.2 ಕೆಜಿ ತೂಕದ ಅನಿಲ ಸಿಲಿಂಡರ್ಗಳನ್ನು 19 ಕೆಜಿಯ ವಾಣಿಜ್ಯ ಸಿಲಿಂಡರ್ ಆಗಿ ಪರಿವರ್ತಿಸುವ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಇದರಿಂದ ಸಿಲಿಂಡರ್ ಸೋಟದಂಥ ಅವಗಢಗಳು ಸಂಭವಿಸುತ್ತಿವೆ ಎಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ (ಜಿಡಿಕೆಎಫ್)ನ ಕರ್ನಾಟಕ ವಿಭಾಗದ ಮುಖ್ಯಸ್ಥ ಚೇತನ ಕುಮಾರ ಎಸ್. ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಇತ್ತೀಚೆಗೆ ಕಾರವಾರದ ಮುದಗಾದಲ್ಲಿ ಸಿಲಿಂಡರ್ ಸೋಟ ಸುದ್ದಿ ಬಂದಿತ್ತು. ಕೆಲ ದಿನಗ ಹಿಂದೆ ಶಿರಸಿಯಲ್ಲಿ ಆಗಿತ್ತು. ಇದೇ ರೀತಿ ರಾಜ್ಯಾದ್ಯಂತ ಆಗಾಗ ಆಗುತ್ತಿರುತ್ತದೆ ಇದನ್ನು ತಪ್ಪಿಸಲು ಸರ್ಕಾರ ಪಡಿತರ ವ್ಯವಸ್ಥೆಯಂತೆ ಬೆರಳಚ್ಚು ನೀಡುವ ವ್ಯವಸ್ಥೆಯನ್ನು ಜಾರಿ ಮಾಡಬೇಕು. ಇಲ್ಲವೇ ಒಟಿಪಿ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಗೃಹ ಬಳಕೆ ಸಿಲಿಂಡರ್ಗಳಿಗೆ ಶೇ.5 ರಷ್ಟು ಜಿಎಸ್ಟಿ, ವಾಣಿಜ್ಯ ಸಿಲಿಂಡರ್ಗೆ ಶೇ. 18 ರಷ್ಟು ಜಿಎಸ್ಟಿ ಇದೆ. ಪ್ರತಿ ವ್ಯಕ್ತಿಯ ಹೆಸರಿನಲ್ಲಿ ವರ್ಷಕ್ಕೆ 12 ಸಿಲಿಂಡರ್ಗಳನ್ನು ಸರ್ಕಾರ ಮಂಜೂರು ಮಾಡುತ್ತದೆ. ಆದರೆ, ಹೆಚ್ಚಿನವರು ಅದನ್ನು ಬಳಸುವುದಿಲ್ಲ. ಅನಿಲ ಕಂಪನಿಗಳು ಅಂಥ ಸಿಲಿಂಡರ್ಗಳನ್ನು ಗ್ರಾಹಕರ ಹೆಸರಿನಲ್ಲಿ ಬಳಸಿಕೊಂಡು, ಅದನ್ನು ವಾಣಿಜ್ಯ ಸಿಲಿಂಡರ್ಗಳಾಗಿ ಪರಿವರ್ತಿಸುತ್ತವೆ. ಇದರಿಂದ ಸರ್ಕಾರಕ್ಕೆ ಪ್ರತಿ ಜಿಲ್ಲೆಯಿಂದ ನೂರಾರು ಕೋಟಿ ರೂ. ಜಿಎಸ್ಟಿ ಮೋಸವಾಗುತ್ತಿದೆ.
ಇನ್ನೊಂದೆಡೆ ಈ ಅಕ್ರಮ ದಂಧೆಯಿಂದ ಗ್ರಾಹಕರ ಜೀವಕ್ಕೆ ಅಪಾಯವಾಗುತ್ತಿದೆ. ಗ್ರಾಹಕರಿಗೆ ಮೋಸವಾಗುತ್ತಿದೆ. ಅಕ್ರಮವಾಗಿ ಸಿಲಿಂಡರ್ಗಳನ್ನು ತುಂಬುವ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಷನ್ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದೆ ಎಂದರು. ಸಂಸ್ಥೆಯ ಪಿಆರ್ಒ ಅರುಣ ಮಾನಗಾವೆ ಸುದ್ದಿಗೋಷ್ಠಿಯಲ್ಲಿದ್ದರು.
ಗ್ರಾಹಕರು ಎಚ್ಚರ ವಹಿಸಬೇಕು
ಗ್ರಾಹಕರು ಸಿಲಿಂಡರ್ ಪಡೆಯುವ ಮೊದಲು ಅದನ್ನು ತೂಕ ಮಾಡಬೇಕು. ಪ್ರತಿ ಸಿಲಿಂಡರ್ ಪಡೆಯುವಾಗ ಅದರ ಸೀಲ್ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ಶಾಂಪೂ ಅಥವಾ ಸಾಬೂನು ನೀರನ್ನು ಸೇರಿಸುವ ಮೂಲಕ ಸಿಲಿಂಡರ್ ಸೋರಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿ, ಸಿಲಿಂಡರ್ನ ಮೇಲೆ ಭದ್ರತಾ ಪರೀಕ್ಷೆಯ ವರ್ಷ್ ನಮೂದಿಸಲಾಗಿದೆಯೇ ಎಂದು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಶಿರಸಿ ಮಾರಿಕಾಂಬಾ ಜಾತ್ರೆ:-ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ನಿಂದ ವಿಶೇಷ ಸಂಚಿಕೆ ಬಿಡುಗಡೆ