ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಕೈಚೆಲ್ಲಿರುವ ಟೀಮ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ನಾಯಕ ವಿರಾಟ್ ಕೊಹ್ಲಿ ಅವರದ್ದು ಕಳಪೆ ನಾಯಕತ್ವ ಎಂದು ಜರಿದಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಭಾರತ ಸರಣಿಯನ್ನು ಕೈಚೆಲ್ಲಿದೆ. ಎರಡನೇ ಪಂದ್ಯದಲ್ಲಿ ವೇಗಿ ಜಸ್ಪ್ರಿತ್ ಬುಮ್ರಾರನ್ನು ನಾಯಕ ಕೊಹ್ಲಿ ನಿರ್ವಹಿಸಿದ ರೀತಿಗೆ ಗಂಭೀರ ಅಸಮಾಧಾನಗೊಂಡಿದ್ದಾರೆ.
ಬುಮ್ರಾ ಮೊದಲ ಓವರ್ನಲ್ಲಿ ಕೇವಲ 7 ರನ್ ನೀಡಿದ್ದರು. ಇನ್ನಿಂಗ್ಸ್ನ ಎರಡನೇ ಮತ್ತು ನಾಲ್ಕನೇ ಓವರ್ ಎಸೆದ ಬೂಮ್ರಾ, ಮೊದಲನೇ ಪವರ್ ಪ್ಲೇನಲ್ಲಿ ಇನ್ನೊಂದು ಓವರ್ ಎಸೆಯಬಹುದಿತ್ತು. ಆದರೆ, ಹೊಸ ಬಾಲ್ನಲ್ಲಿ ಕೊಹ್ಲಿ ಅವರು ಬುಮ್ರಾಗೆ ಕೇವಲ ಎರಡು ಓವರ್ ಯಾಕೆ ಕೊಟ್ಟರು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ: FACT CHECK | ಅರ್ಚಕರ ಜತೆಗೆ ಚಿರತೆ ಕುಟುಂಬ ಮಲಗುತ್ತಿದ್ದ ವೈರಲ್ ವಿಡಿಯೋದ ನಿಜಾಂಶವೇನು?
ನಿಜಕ್ಕೂ ಅವರ (ಕೊಹ್ಲಿ) ನಾಯಕತ್ವವನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಈ ರೀತಿಯ ಬ್ಯಾಟಿಂಗ್ ಲೈನ್ ಅಪ್ ರೀತಿ ತಡೆಯಬೇಕಾದರೆ, ವಿಕೆಟ್ ಪಡೆಯುವುದು ಎಷ್ಟು ಮಹತ್ವ ಎನ್ನುವುದರ ಬಗ್ಗೆ ನಾವು ಚರ್ಚಿಸುತ್ತೇವೆ. ಆದರೂ, ಪ್ರೀಮಿಯರ್ ಬೌಲರ್ಗೆ ಎರಡು ಓವರ್ ಮಾಡಲು ಹೇಳುತ್ತೀರಿ. ಸಾಮಾನ್ಯವಾಗಿ ಏಕದಿನ ಪಂದ್ಯಗಳಲ್ಲಿ 4-3-3 ಮಾದರಿಯಲ್ಲಿ ಓವರ್ ಎಸೆಯುತ್ತಾರೆ. ಬಹುಶಃ ನಾಲ್ಕು ಓವರ್ಗಳನ್ನು ಮಾಡಿದ್ದುಂಟು ಎಂದು ಗಂಭೀರ್ ತಿಳಿಸಿದ್ದಾರೆ.
ಕೇವಲ ಎರಡೇ ಓವರ್ಗೆ ನಿಮ್ಮ ಪ್ರೀಮಿಯರ್ ಫಾಸ್ಟ್ ಬೌಲರ್ ಅನ್ನು ನಿಲ್ಲಿಸಿದರೆ ಅದು ಪ್ರಮುಖ ಸುದ್ದಿಯೇ, ಈ ರೀತಿಯ ನಾಯಕತ್ವವನ್ನು ಈ ಕ್ಷಣದವರೆಗೂ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಆ ನಾಯಕತ್ವದ ಬಗ್ಗೆ ವಿವರಣೆಯನ್ನು ನೀಡಲಾಗುತ್ತಿಲ್ಲ. ಇದು ಟಿ20 ಕ್ರಿಕೆಟ್ ಅಲ್ಲ. ಕೊಹ್ಲಿ ಅವರದ್ದು ನಿಜಕ್ಕೂ ಕಳಪೆ ನಾಯಕತ್ವ ಎಂದು ಗಂಭೀರ್ ಟೀಕಿಸಿದ್ದಾರೆ.
ಮುಂದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅಥವಾ ಶಿವಂ ದುಬೆಗೆ ಅವಕಾಶ ಕೊಡಬಹುದು. ಅವರು ಏಕದಿನ ಮಾದರಿ ಪಂದ್ಯಗಳಲ್ಲಿ ಹೇಗೆ ನಿರ್ವಹಿಸುತ್ತಾರೆ ಎಂಬುದು ತಿಳಿಯುತ್ತದೆ. ಆದರೆ, ನೀವು ಆಸ್ಟ್ರೇಲಿಯಾದಲ್ಲಿ ಯಾರೂ ಸಹ ಸರಿಯಾಗಿ ನಿರ್ವಹಿಸದಿದ್ದರೆ, ಅದು ಆಯ್ಕೆಯಲ್ಲಿನ ದೋಷ ಎಂದಿದ್ದಾರೆ. (ಏಜೆನ್ಸೀಸ್)