ನವದೆಹಲಿ: ಸೋಮವಾರದಿಂದ ದೆಹಲಿಯ ಜಾಫ್ರಾಬಾದ್ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಯು ಹಿಂಸಾತ್ಮಕ ತಿರುವು ಪಡೆದುಕೊಂಡಿರುವುದಕ್ಕೆ ಕಾರಣರಾಗಿರುವವರು ಕಪಿಲ್ ಮಿಶ್ರಾ ವಿರುದ್ಧ ಸೂಕ್ತ ಕ್ರಮ ತೆಗೆದಕೊಳ್ಳಬೇಕು ಎಂದು ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
ಘಟನೆಯ ಕುರಿತಾಗಿ ಮಾತನಾಡಿರುವ ಅವರು, “ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಯಾರೇ ಆಗಲೀ, ಯಾವುದೇ ಪಕ್ಷದವರಾಗಿರಲಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು. ರಾಜ್ಯದಲ್ಲಿರುವ ಪೊಲೀಸರಿಗೇ ಸುರಕ್ಷತೆ ಇಲ್ಲವೆಂದಾದಮೇಲೆ ಜನರ ಪರಿಸ್ಥಿತಿ ಹೇಗಿರಬೇಕು ಎನ್ನುವುದನ್ನು ನಾವು ಗಮನಿಸಬೇಕು” ಎಂದು ಅವರು ಹೇಳಿದ್ದಾರೆ.
ಭಾನುವಾರದಂದು ಜಾಫ್ರಾಬಾದ್ನ ಸಭೆಯೊಂದರಲ್ಲಿ ಭಾಗವಹಿಸಿದ ಬಿಜೆಪಿಯ ನಾಯಕ ಕಪಿಲ್ ಮಿಶ್ರಾ, ಜಾಫ್ರಾಬಾದ್ನಲ್ಲಿರುವ 35 ಲಕ್ಷ ಜನರನ್ನು ಕತ್ತರಿಸಲೆಂದು ಪ್ರತಿಭಟನಾಕಾರರು ರಸ್ತೆಗಳನ್ನು ಸ್ಥಗಿತಗೊಳಿಸುತ್ತಿದ್ದಾರೆ. ಪೊಲೀಸರು ಇನ್ನು ಮೂರು ದಿನಗಳಲ್ಲಿ ಪ್ರತಿಭಟನಾಕಾರರನ್ನು ಚದುರಿಸಬೇಕು ಎಂದು ಒತ್ತಾಯಿಸಿದ್ದರು. ಇದರಿಂದಾಗಿ ಸಿಟ್ಟಿಗೆದ್ದ ಸಿಎಎ ವಿರೋಧಿ ಹೋರಾಟಗಾರರು ಸೋಮವಾರದಂದು ತಮ್ಮ ಹೋರಾಟವನ್ನು ಇನ್ನೊಂದು ದಿಕ್ಕಿಗೆ ಕರೆದೊಯ್ದು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಇಟ್ಟು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಈವರೆಗೆ ಒಬ್ಬ ಪೊಲೀಸ್ ಪೇದೆ ಸೇರಿದಂತೆ 7 ಮಂದಿ ಮೃತರಾಗಿದ್ದಾರೆ. 50ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್)