ಗಂಗಾವತಿ: ಸಾಹಿತ್ಯ ಸಮ್ಮೇಳನವನ್ನು ಮನೆ ಹಬ್ಬದಂತೆ ಆಚರಿಸಬೇಕಿದ್ದು, ಎರಡು ದಿನ ತಾಲೂಕಿನ ಜನರು ಭಾಗವಹಿಸುವಂತೆ ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದರು.
ತಾಲೂಕು ಸಮ್ಮೇಳನ ನಿಮಿತ್ತ ಹಮ್ಮಿಕೊಂಡಿದ್ದ ಬೈಕ್ ಜಾಗೃತಿ ಜಾಥಾಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಬಲವರ್ಧನೆಗೆ ಸಮ್ಮೇಳನ ಪೂರಕವಾಗಿದ್ದು, ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರವನ್ನು ಸಿಂಗಾರಗೊಳಿಸಿ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕಿದೆ ಎಂದು ಸಲಹೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ ಮಾತನಾಡಿ, ಸಮ್ಮೇಳನದಲ್ಲಿ ಕಲಾವಿದೆ ಮಹನ್ಯಾ ಪಾಟೀಲ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗೋಷ್ಠಿಗಳ ಮೂಲಕ ತಾಲೂಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ತಹಸೀಲ್ದಾರ್ ಮಂಜುನಾಥ ಕಂಬಾಳಿಮಠ, ಡಿವೈಎಸ್ಪಿ ಎಚ್.ಶೇಖರಪ್ಪ, ನಗರ ಪಿಐ ಅಡಿವೇಶ ಎನ್.ಗುದಿಗೊಪ್ಪ, ಬಿಇಒ ಸೋಮಶೇಖರ ಗೌಡ ತಿಪ್ಪನಾಳ್, ಕಸಾಪ ಪದಾಧಿಕಾರಿಗಳಾದ ಶಿವಾನಂದ ತಿಮ್ಮಾಪುರ, ಶಿವಕಾಂತ ತಳವಾರ, ಪಂಪಣ್ಣ ನಾಯಕ, ಚನ್ನಬಸವ ಜೇಕಿನ್, ಎಚ್.ಬಸವರಾಜ್, ಗುರು ಭೋವಿ, ಮಂಜುನಾಥ ಪತ್ತಾರ್, ಚಂದ್ರಶೇಖರ್ ಶ್ರೇಷ್ಠಿ, ಮೈಲಾರಪ್ಪ ಬೂದಿಹಾಳ್, ರುದ್ರೇಶ ಆರಾಳ್ ಇತರರಿದ್ದರು.