ಗಂಗಾವತಿ: ಜಯನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಮಣ್ಣಿನ ಸಾಂಪ್ರದಾಯಕ ವಸ್ತುಗಳ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಮಣ್ಣಿನ ಹಣತೆ, ಕುಡಿಕೆ ಇತರ ಕರಕುಶಲ ವಸ್ತುಗಳನ್ನು ತಯಾರಿಸು ವಿಧಾನ, ಬಾಳಿಕೆ ಮತ್ತು ಬಳಕೆಯಿಂದಾಗುವ ಲಾಭದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಮಕ್ಕಳಿಂದಲೇ ಹಣತೆ ತಯಾರಿಸಿ, ಮಣ್ಣಿನ ಮಹತ್ವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು.
ಮಕ್ಕಳೇ ತಯಾರಿಸಿದ ಹಣತೆಯನ್ನು ಪಾಲಕರಿಗೆ ನೀಡಲಾಯಿತು. ತರಬೇತುದಾರ ಬೆಳಗಾವಿಯ ವೀರಬಸಪ್ಪ, ಮಣ್ಣಿನ ವಸ್ತುಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಶಾಲಾಡಳಿತ ಮಂಡಳಿ ಅಧ್ಯಕ್ಷ ನೇತ್ರಾಜ್ ಗುರುವಿನಮಠ ಮಾತನಾಡಿ, ಮಕ್ಕಳಿಗೆ ಪಾಠದ ಜತೆಗೆ ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕೃತಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ದೀಪಾವಳಿ ನಿಮಿತ್ತ ನ.11ರಂದು ಮಣ್ಣಿನಿಂದ ತಯಾರಿಸಿದ ಸಾಂಪ್ರಾದಾಯಕ ವಸ್ತುಗಳ ಮೇಳ ಹಮ್ಮಿಕೊಳ್ಳಲಾಗುವುದು ಎಂದರು. ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕರಾದ ಪೂರ್ಣಿಮಾ, ರಾಗಿಣಿ, ವೀರಮ್ಮ, ಕುಮುದಿನಿ, ಗೌಸಿಯಾ, ಭಾರತಿ ಇತರರಿದ್ದರು.