ಗಂಗಾವತಿ: ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕಿದ್ದು, ಪರಂಪರೆಯನ್ನು ಯುವ ಜನತೆಗೆ ಪರಿಚಯಿಸಬೇಕಿದೆ ಎಂದು ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗುಡ್ಲಾನೂರ್ ಹೇಳಿದರು.
ತಾಲೂಕಿನ ಹಿರೇಬೆಣಕಲ್ ಮೋರೆರ ಬೆಟ್ಟದಲ್ಲಿ ಎಚ್.ಆರ್.ಸರೋಜಮ್ಮ ಮತ್ತು ಕೊಟ್ಟೂರೇಶ್ವರ ಪ.ಪೂ.ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ ಸೋಮವಾರ ಆಯೋಜಿಸಿದ್ದ ಪ್ರಾಗೈತಿಹಾಸಿಕ ಸ್ಥಳ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೋರೆರ ಬೆಟ್ಟ ಬೃಹತ್ ಶಿಲಾಯುಗದ ನೆಲೆಯಾಗಿದ್ದು, ಕೃಷಿ ಮತ್ತು ಪಶುಪಾಲನೆಗೆ ಒತ್ತು ನೀಡಿದ ಮೋರೆರ ಸಮುದಾಯ ವಾಸಿಸುತ್ತಿತ್ತು.
ಹಲವು ಕುರಹುಗಳನ್ನು ಪತ್ತೆ ಹಚ್ಚಲಾಗಿದ್ದು, ಕಿರುಪ್ರವಾಸ ಯೋಜನೆಗಳ ಮೂಲಕ ಜಾಗೃತಿ ಮೂಡಿಸಬೇಕಿದೆ. ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿ ಯೋಜನೆಯಡಿ ಪರಿಚಯ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿದೆ. ಹಂಪಿ ಮತ್ತು ಅಂಜನಾದ್ರಿಗೆ ಬರುವ ಪ್ರವಾಸಿಗರನ್ನು ಸೆಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಚಂದ್ರಶೇಖರ ಹಂಚಿನಾಳ್, ಹನುಮಂತ ವಡ್ಡರ್, ಶಿಬಿರಾಧಿಕಾರಿ ಯಮನೂರಪ್ಪ ಕಂಬಳಿ ಹಾಗೂ ಶಿಬಿರಾರ್ಥಿಗಳಿದ್ದರು.