ಗಂಗಾವತಿ: ದೇವದಾಸಿ ಪದ್ಧತಿ ನಿರ್ಮೂಲನೆಗೆ ಕಾನೂನಿನ ಅರಿವು ಮುಖ್ಯವಾಗಿದೆ. ದೇವಸ್ಥಾನಗಳ ಅರ್ಚಕರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಸಿಡಿಪಿಒ ಗಂಗಪ್ಪ ಆರೋಲಿ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಸ್ನೇಹ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ದೇವಸ್ಥಾನದ ಅರ್ಚಕರಲ್ಲಿ ದೇವದಾಸಿ ಪದ್ಧತಿ, ಲೈಂಗಿಕ ಶೋಷಣೆ ವಿರುದ್ಧದ ಕಾನೂನುಗಳ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ದೇವದಾಸಿ ಪದ್ಧತಿ, ಬಾಲ್ಯವಿವಾಹ ಪ್ರಕರಣಗಳ ಬಗ್ಗೆ ದೇವಸ್ಥಾನಗಳ ಅರ್ಚಕರಿಗೆ ಹೆಚ್ಚಿನ ಮಾಹಿತಿಯಿದ್ದು, ಕೆಲವೊಮ್ಮೆ ಭಾಗಿದಾರರಾಗಿರುತ್ತಾರೆ. ಅನಿಷ್ಟ ಪದ್ಧತಿಗಳ ವಿರುದ್ಧ ದೇವಸ್ಥಾನದಿಂದಲೇ ಅರಿವು ಮೂಡಿಸಬೇಕಿದೆ ಎಂದರು.
ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ದೇವದಾಸಿ ಪದ್ಧತಿ ಮತ್ತು ಬಾಲ್ಯವಿವಾಹ ಪ್ರಕರಣ ಹೆಚ್ಚುತ್ತಿದ್ದು,ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಮುಖ್ಯವಾಗಿದೆ ಎಂದರು. ಸಂಸ್ಥೆಯ ಉದ್ದೇಶ, ಯೋಜನೆಗಳು ಮತ್ತು ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಸಂಸ್ಥೆ ನಿರ್ದೇಶಕ ಟಿ.ರಾಮಾಂಜನೇಯ ಮಾತನಾಡಿದರು.
ತಾಪಂ ವ್ಯವಸ್ಥಾಪಕಿ ಬಿ.ಉಷಾ, ಉಪ ನಿರ್ದೇಶಕಿ ಕೆ.ಪಿ.ಜಯಾ, ಸಂಪನ್ಮೂಲ ವ್ಯಕ್ತಿ ನಾಗರಾಜ್ ಗುತ್ತೇದಾರ್, ಸಂಸ್ಥೆ ಪದಾಧಿಕಾರಿಗಳಾದ ಬಸಮ್ಮ, ಶೃತಿ, ಕೆ.ನಾಗರತ್ನ, ಎಸ್.ಗಿರಿಜಾ, ನೇತ್ರಾವತಿ, ಪ್ರತಿಭಾ ಹಿರೇಮಠ, ರೇಖಾ ಇತರರಿದ್ದರು.