ಗಂಗಾವತಿ: ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಬಣದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಹೋರಾಟ ಹತ್ತಿಕ್ಕುವ ಹೋರಾಟ
ರಾಜ್ಯದ ನೆಲ, ಜಲ, ಭಾಷೆಗಾಗಿ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳನ್ನು ಹತ್ತಿಕ್ಕಲು ಸರ್ಕಾರ ಸಂಚು ನಡೆಸಿದೆ. ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ ಇತರರನ್ನು ಬಂಧಿಸಿರುವುದು ಸರಿಯಲ್ಲ. ಹೊರ ರಾಜ್ಯದ ಪ್ರತಿಷ್ಠಿತ ಕಂಪನಿಗಳು ಕನ್ನಡ ಮರೆಮಾಚುತ್ತಿವೆ. ಅಲ್ಲದೆ ಕನ್ನಡಿಗರಿಗೂ ಉದ್ಯೋಗ ನೀಡುತ್ತಿಲ್ಲ. ಹೋರಾಟಗಾರರ ಮೇಲೆ ಎಲ್ಲ ಪ್ರಕರಣ ಹಿಂಪಡೆಯಬೇಕಿದ್ದು, ಕೂಡಲೇ ಬಿಡುಗಡೆಗೊಳಿಸಬೇಕು. ಎಲ್ಲ ವಹಿವಾಟು ಕೇಂದ್ರಗಳ ಮೇಲೆ ಕನ್ನಡ ನಾಮಲಕ ಕಡ್ಡಾಯಗೊಳಿಸುವ ಕಾಯ್ದೆ ಜಾರಿಗೊಳಿಸಬೇಕು ಎಂದು ಸಮಿತಿ ಕಲ್ಯಾಣ ಕರ್ನಾಟಕ ವಿಭಾಗದ ಸಂಚಾಲಕ ಜಿ.ಹಂಪೇಶ ಹರಿಗೋಲು ಒತ್ತಾಯಿಸಿದರು. ತಹಸಿಲ್ ಕಚೇರಿಯ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.
ಸಮಿತಿಯ ತಾಲೂಕು ಸಂಚಾಲಕ ಬೆಟ್ಟಪ್ಪ ಹಿರೇಕುರುಬರ್, ಪದಾಧಿಕಾರಿಗಳಾದ ಯಮನೂರಪ್ಪ ನಾಯಕ ಹುಲಿಹೈದರ್, ವಿರೇಶ ನಾಯಕ, ದೇವಣ್ಣ ಐಹೊಳೆ, ದುರುಗಪ್ಪ, ಅಯ್ಯಣ್ಣ ಡಂಬರ್, ಮಂಜುನಾಥ ಭಜಂತ್ರಿ ಇತರರಿದ್ದರು.