ಗಂಗಾವತಿ: ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವಂತೆ ಒತ್ತಾಯಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಸದಸ್ಯರು ನಗರದ ಅಂಬೇಡ್ಕರ್ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜ್ಗೆ ಮನವಿ ಸಲ್ಲಿಸಿದರು.
ಸಮಿತಿ ಕ.ಕ.ವಿಭಾಗೀಯ ಸಂಚಾಲಕ ಜಿ.ಹಂಪೇಶ ಹರಿಗೋಲು ಮಾತನಾಡಿ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಎಸ್ಸಿಪಿ, ಎಸ್ಟಿಪಿ ಕಾಮಗಾರಿಯಲ್ಲಿ ಲೋಪವಾಗಿದ್ದು, ತನಿಖೆಗೆ ಪತ್ರ ಬರೆದರೂ ಗಂಭೀರ ಪರಿಗಣಿಸುತ್ತಿಲ್ಲ. ಉಪ ನೋಂದಣಿ, ಪಪಂ ಅಭಿವೃದ್ಧಿ ನಿಗಮ, ಆಹಾರ ಇಲಾಖೆ, ಬಿಸಿಯೂಟ ಪಶುಸಂಗೋಪನೆ, ಕುಡಿವ ನೀರು ಮತ್ತು ನೈರ್ಮಲ್ಯ ಇತರ ಇಲಾಖೆ ಯೋಜನೆಗಳು ಅರ್ಹ ಲಾನುಭವಿಗಳಿಗೆ ತಲುಪುತ್ತಿಲ್ಲ.
15ನೇ ಹಣಕಾಸು ಯೋಜನೆ ಅನುದಾನ ಪೋಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಬಡ ಕುಟುಂಬಕ್ಕೆ ಸರ್ಕಾರದ ಯೋಜನೆ ತಲುಪಿಸಲು ವಿಳಂಭ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಮಿತಿ ಪದಾಧಿಕಾರಿಗಳಾದ ಶಿವಮೂರ್ತಿ ಕೊರಮ, ವೀರೇಶ ನಾಯಕ, ಕಳಕಪ್ಪ ನಾಯಕ, ಅಮರೇಶ ಇತರರಿದ್ದರು.