ಗಂಗಾವತಿ: ತಾಲೂಕಿನ ಗಡ್ಡಿಯಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಅರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಸಮಿತಿ ಸದಸ್ಯರು ನಗರದ ತಾಪಂ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ, ಇಒ ಡಾ.ಡಿ.ಮೋಹನ್ಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ, ಗಡ್ಡಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ವಾತಾವರಣ ಕಲುಷಿತವಾಗಿದೆ. ಸೊಳ್ಳೆಗಳ ಕಾಟ ಹೆಚ್ಚಿದ್ದು, ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ರಸ್ತೆ ಅವ್ಯವಸ್ಥೆಯಿಂದ ಧೂಳ ವಿಪರೀತವಾಗಿದೆ. ಯರ್ರಾಬಿರ್ರಿಯಾಗಿ ಚಲಿಸುವ ವಾಹನಗಳಿಗೆ ಕಡಿವಾಣ ಹಾಕಬೇಕು. ಗ್ರಾಮಸಭೆಯ ಮೂಲಕ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಸುರೇಶ ಗಡ್ಡಿ, ಶ್ಯಾಮಸುಂದರ, ಹುಲುಗಪ್ಪ ಉಪ್ಪಾರ, ಶಿವರಾಜ ಭೋವಿ, ದುರುಗಪ್ಪ ನಾಯಕ, ಕಲ್ಲಪ್ಪ, ತಿಮ್ಮಣ್ಣ ಪೂಜಾರ್, ಸಂಗನಗೌಡ ಪೊ.ಪಾಟೀಲ್ ಇತರರಿದ್ದರು.