ಕೊಪ್ಪಳ: ಹಿಂದು ಮಹಾಮಂಡಳಿಯಿಂದ ಗಣೇಶೋತ್ಸವ ನಿಮಿತ್ತ ನಗರದ ಈಶ್ವರ ಉದ್ಯಾನವನದಲ್ಲಿ ಶುಕ್ರವಾರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.
11ನೇ ದಿನ ಗಣೇಶ ವೇಳೆ ಸರ್ಜನೆ ನಿಮಿತ್ತ ಪ್ರತಿವರ್ಷದಂತೆ ಈ ಬಾರಿಯೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ನಗರದಲ್ಲಿ ಹಿಂದೂ ಸಂಘಟನೆಗಳು ಒಗ್ಗೂಡಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಶನಿವಾರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಈ ನಿಮಿತ್ತ ಸುಮಾರು 20 ಸಾವಿರ ಜನರಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಬಾರಿ ವಿಶೇಷವಾಗಿ ಊಟದಲ್ಲಿ ಆಂಧ್ರದ ಉಪ್ಪಿನಕಾಯಿ, ತಮಿಳುನಾಡಿನ ಸಿಹಿ ಪರಮಾನ್ನ, 12 ಕ್ವಿಂಟಲ್ ಗೋಧಿಹುಗ್ಗಿ, 20 ಕ್ವಿಂಟಲ್ ಅನ್ನ, 5 ಕ್ವಿಂಟಲ್ ಬದನೆಕಾಯಿ ಪಲ್ಲೆ, 20 ಸಾವಿರ ಮಿರ್ಚಿ, 100 ಲೀಟರ್ ಮೊಸರಿನಿಂದ ಮಾಡಿದ ಮಜ್ಜಿಗೆ ಹಾಗೂ ಸಾಂಬಾರು ಮಾಡಿಸಲಾಗಿತ್ತು. ಸಾರ್ವಜನಿಕರು ಸರತಿ ಸಾಲಿನಲ್ಲಿ ಬಂದು ಪ್ರಸಾದ ಸ್ವೀಕರಿಸಿದರು.
ಮುಸ್ಲಿಂ ಭಕ್ತರೂ ಭಾಗಿ: ಹಿಂದು ಮಹಾ ಮಂಡಳಿಯು ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗೆ ಮುಸ್ಲಿಂ ಭಕ್ತರು ದರ್ಶನ ಪಡೆದು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಗಣೇಶೋತ್ಸವದಲ್ಲಿ ಭಾಗವಹಿಸುವ ಮೂಲಕ ಭಾವೈಕ್ಯತೆ ಮೆರೆದರು.
ರಾಷ್ಟ್ರನಾಯಕರ ಭಾವಚಿತ್ರ:
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವಿನಾಯಕ ಸಾರ್ವಕರ್ ಸೇರಿ ರಾಷ್ಟ್ರ ನಾಯಕರ ಭಾವಚಿತ್ರಗಳು ಈಶ್ವರ ಉದ್ಯಾನವನದಲ್ಲಿ ರಾರಾಜಿಸುತ್ತಿದ್ದವು. ಮಹನೀಯರ ದೇಶಸೇವೆ ಪರಿಚಯಿಸುವ ಕೆಲಸ ಹಿಂದೂ ಮಹಾ ಮಂಡಳಿಯು ಯಶಸ್ವಿಯಾಗಿ ಮಾಡಿದೆ. ಈಶ್ವರ ದೇವಸ್ಥಾನ ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪೆಂಡಾಲ್ ಸುತ್ತಲೂ ದೀಪಾಲಂಕಾರ ಮಾಡಲಾಗಿದೆ.
ಗವಿಮಠದ 2,500 ವಿದ್ಯಾರ್ಥಿಗಳು ಭಾಗಿ: ಗವಿಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಸುಮಾರು 2500ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಸಾದ ಸ್ವೀಕರಿಸಿದರು. ಮಕ್ಕಳು ಮಠದಿಂದ ಶ್ರದ್ಧಾ ಭಕ್ತಿಯಿಂದ ಸಾಲಿನಲ್ಲಿ ಬಂದು ಗಣೇಶೋತ್ಸವದ ಅನ್ನ ಪ್ರಸಾದ ಸ್ವೀಕರಿಸಿದರು. ಮಕ್ಕಳ ನಡೆ ಇತರರಿಗೂ ಮಾದರಿಯಾಗಿತ್ತು.
ನಾಳೆ ಗಣೇಶ ವಿಸರ್ಜನೆ: ಹಿಂದೂ ಮಹಾ ಮಂಡಳಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ ವಿಸರ್ಜನೆ ಶನಿವಾರ ಸಂಜೆ ನಡೆಯಲಿದೆ. ಈಶ್ವರ ಉದ್ಯಾನವನದಿಂದ ವಿಸರ್ಜನಾ ಮೆರವಣಿಗೆ ಆರಂಭವಾಗಲಿದ್ದು, ಮುನಿರಾಬಾದ್ ಬಳಿಯ ಎಡದಂಡೆ ಕಾಲುವೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಯಾಗಲಿದೆ. ಇಂದಿನ ಕಾರ್ಯಕ್ರಮಕ್ಕೆ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.