‘ಘಾಯಲ್’, ‘ದಾಮಿನಿ’, ‘ಬರ್ಸಾತ್’, ‘ಖಾಕೀ’ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳನ್ನು ನಿರ್ದೇಶಿಸಿರುವ ರಾಜ್ಕುಮಾರ್ ಸಂತೋಷಿ ಆಕ್ಷನ್ ಕಟ್ ಹೇಳಿರುವ ಸಿನಿಮಾ ‘ಗಾಂಧಿ ಗೋಡ್ಸೆ : ಏಕ್ ಯುದ್ಧ್’. ಕೆಲವು ದಿನಗಳ ಹಿಂದಷ್ಟೇ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ, ಇದೀಗಿ ಟ್ರೇಲರ್ ಮುಖೇನ ಮತ್ತೊಮ್ಮೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ, ಚಿತ್ರದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ನಾಥೂರಾಮ್ ಗೋಡ್ಸೆ ನಡುವಿನ ಸೈದ್ಧಾಂತಿಕ ಸಂಘರ್ಷ, ವೈಚಾರಿಕ ಭಿನ್ನಾಭಿಪ್ರಾಯಗಳ ಬಗ್ಗೆ ನೇರವಾಗಿ ಬೆಳಕು ಚೆಲ್ಲಲಾಗಿದೆ.
ನಾಥೂರಾಮ್ ಗೋಡ್ಸೆ ದಾಳಿಯಿಂದ ಬದುಕುಳಿಯುವ ಗಾಂಧೀಜಿ, ಗೋಡ್ಸೆಯನ್ನು ಜೈಲಿನಲ್ಲಿ ಭೇಟಿಯಾಗುತ್ತಾರೆ. ಆಗ ಅವರ ನಡುವೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗುತ್ತದೆ. ಆ ಚರ್ಚೆಯೇ ಚಿತ್ರದ ಕೇಂದ್ರಬಿಂದು. ಚಿತ್ರದ ಬಗ್ಗೆ ನಿರ್ದೇಶಕ ರಾಜ್ಕುಮಾರ್ ಸಂತೋಷಿ, ‘ಗಾಂಧಿ ಮತ್ತು ಗೋಡ್ಸೆ, ಇಬ್ಬರ ಮೇಲೂ ನನಗೆ ಅನುಕಂಪವಿದೆ. ಗಾಂಧೀಜಿಗೆ ಎಷ್ಟು ಮನ್ನಣೆ ದೊರೆಯಿತೋ, ಅಷ್ಟೇ ಆರೋಪಗಳೂ ಅವರ ವಿರುದ್ಧ ಕೇಳಿಬಂದವು. ಇವತ್ತಿಗೂ ಭಗತ್ ಸಿಂಗ್ಗೆ ಗಲ್ಲು ಶಿಕ್ಷೆಯಾದಾಗ ಗಾಂಧೀಜಿ ಏಕೆ ಅವರನ್ನು ರಕ್ಷಿಸುವ ಯತ್ನ ಮಾಡಲಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಾರೆ.
ಹಾಗೆಯೇ ಗಾಂಧಿ ಹತ್ಯೆ ಮಾಡಿದ ಬಳಿಕ ಕೋರ್ಟ್ನಲ್ಲಿ ವಿಚಾರಣೆ ವೇಳೆ ಗೋಡ್ಸೆ ನೀಡಿದ್ದ ಹೇಳಿಕೆಗಳನ್ನು ದಶಕಗಳಿಂದ ಮುಚ್ಚಿಡಲಾಗಿದೆ. ಗೋಡ್ಸೆ ಆಗ ಏನು ಸಮರ್ಥನೆ ನೀಡಿದ್ದರು ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ. ಚಿತ್ರದಲ್ಲಿ ಮಹಾತ್ಮಾ ಗಾಂಧೀಜಿ ಪಾತ್ರದಲ್ಲಿ ದೀಪಕ್ ಅಂಟಾನಿ ಹಾಗೂ ನಾಥೂರಾಮ್ ಗೋಡ್ಸೆ ಪಾತ್ರದಲ್ಲಿ ಚಿನ್ಮಯ್ ಮಂಡ್ಲೇಕರ್ ನಟಿಸಿದ್ದಾರೆ. ‘ಗಾಂಧಿ ಗೋಡ್ಸೆ : ಏಕ್ ಯುದ್ಧ್’ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದು, ಇದೇ ಗಣರಾಜ್ಯೋತ್ಸವದಂದು ಸಿನಿಮಾ ಬಿಡುಗಡೆಯಾಗಲಿದೆ. –ಏಜೆನ್ಸೀಸ್
ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ