ಯಲಬುರ್ಗಾ: ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಿಂದ ಗದಗ-ನರೇಗಲ್ಗೆ ಪಟ್ಟಣದ ಸಾರಿಗೆ ಘಟಕದಿಂದ ಹೆಚ್ಚುವರಿ ಬಸ್ ಬಿಡುವಂತೆ ಒತ್ತಾಯಿಸಿಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೋಮವಾರ ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರಿಗೆ ಘಟಕದಿಂದ ಮುಧೋಳ, ಹಿರೇಮ್ಯಾಗೇರಿ ಮಾರ್ಗವಾಗಿ ಬೆಳಗ್ಗೆ 8.15ಕ್ಕೆ ಗದಗ, ನರೇಗಲ್ಗೆ ಬಸ್ ಬಿಡಲಾಗಿದೆ. ಮುಧೋಳ, ಹಿರೇಮ್ಯಾಗೇರಿ ಗ್ರಾಮದ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಮೇಲಾಗಿ ಹಿರೇಮ್ಯಾಗೇರಿ ವಿದ್ಯಾರ್ಥಿಗಳಿಗೆ ತೀರಾ ಸಮಸ್ಯೆ ಎದುರಾಗಿದೆ. ಇದೇ ಮಾರ್ಗವಾಗಿ ವಿಜಯಪುರ ಬಸ್ ಸಂಚರಿಸಿದರೂ ನಿಲ್ಲುವುದಿಲ್ಲ. ಸಮೀಪದ ಗಜೇಂದ್ರಗಡ-ಸಂಕನೂರು ಕ್ರಾಸ್ ಮಾರ್ಗವಾಗಿ ಸಿಂಧನೂರು, ಲಿಂಗಸುಗೂರು ಬಸ್ ಪ್ರಯಾಣಿಸಿದರೂ ಸ್ಟಾಪ್ ಆಗುವುದಿಲ್ಲ. ಇದರಿಂದ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಹೆಚ್ಚುವರಿ ಬಸ್ ಬಿಡುವಂತೆ ಸಂಬಂಧಿಸಿದ ಡಿಪೋ ವ್ಯವಸ್ಥಾಪಕಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ಕಳಕಪ್ಪ ಕಲ್ಗುಡಿ, ಜಾಲಾರ್ಸಾಬ್ ಆದಾಪುರ, ಕಲ್ಲಪ್ಪ ಹೊಸಮನಿ, ಮಹಾಂತೇಶ ಬೆಲ್ಲದ, ಮಹೇಶ ಗುರಿಕಾರ, ನಿಂಗರಾಜ ಗಾಣಿಗೇರ, ಶರಣಪ್ಪ ಲಿಗಾಡಿ, ಶರಣಪ್ಪ ಜಿವೊಜಿ, ಶರಣಪ್ಪ ಆರಬೆಳ್ಳಿ, ರಾಜಶೇಖರ ಸುಬೇದಾರ ಒತ್ತಾಯಿಸಿದ್ದಾರೆ.