ವಿಜಯವಾಣಿ ಸುದ್ದಿಜಾಲ ಗದಗ
ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆಯಿಂದ ಹಿಂದೆ ಸರಿಯಲು ಮತ್ತು ಪ್ರಿಯಾಂಕಾ ವಾದ್ರಾ ಪ್ರಚಾರ ಸಭೆಯಲ್ಲಿ ಭಾಗವಹಿಸದೇ ಇರುವುದಕ್ಕೆ ಜೆಡಿಎಸ್ ಹೋರಾಟವೇ ಕಾರಣ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಹೇಳಿದರು.
ಭಾನುವಾರ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಪ್ರಿಯಾಂಕಾ ವಾದ್ರಾ ಅವರು ಆಗಮಿಸಿದ್ದಾಗ ಪೊಲೀಸರು ಒತ್ತಾಯದಿಂದ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿದರು. ಸರ್ಕಾರ ಪೊಲೀಸ್ ಬಲವನ್ನು ದುರುಪಯೋಗ ಮಾಡಿಕೊಂಡು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. ಆದರೂ ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದರು.
ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರಿನ ಸಮಸ್ಯೆ ಬೃಹದಾಕಾರವಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಜೆಡಿಎಸ್ ಹೋರಾಟ ಆರಂಭಿಸುತ್ತದೆ. ಕುಡಿಯುವ ನೀರಿಗಾಗಿ ಸರ್ಕಾರ ಸಾವಿರಾರು ಕೋಟಿ ರೂ. ವ್ಯಯ ಮಾಡಿದರೂ ನೀರು ಬರುತ್ತಿಲ್ಲ. ಅಸಮರ್ಪಕ ನೀರು ಪೂರೈಕೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿ, ನೀರು ಪೂರೈಕೆ ಆಗುವ ವರೆಗೂ ಚಳವಳಿ ನಡೆಸಲಾಗುವುದು ಎಂದರು.
ಗಿರೀಶ ಸಂಶಿ, ಎಂ.ಎಸ್. ಪರ್ತಗೌಡ್ರ, ಬಿಜೆಪಿ ಮುಖಂಡ ಗುದ್ನೆಪ್ಪ ಶೆಟ್ಟರ್, ಬಸವರಾಜ ಅಪ್ಪಣ್ಣವರ, ಅಶೋಕ ಜವಳಿ, ಪ್ರುಲ್ ಪುಣೇಕರ, ಕೆ.ಎಫ್ . ದೊಡ್ಡಮನಿ, ಮನೋಜ ಮೆಹತಾ ಇದ್ದರು.