ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಸುದಾರರಿಲ್ಲದೆ ಕರೊನಾದಿಂದ ಮೃತಪಟ್ಟುವರ ಸದ್ಗತಿ ಕಾರ್ಯಗಳನ್ನು ಸರ್ಕಾರ ವತಿಯಿಂದ ಸೋಮವಾರ ನಡೆಸಲಾಯಿತು.
ಸೋಮೇಶ್ವರ ಕ್ಷೇತ್ರದಲ್ಲಿ 12 ಮೃತದೇಹಗಳ ಅಸ್ತಿಯನ್ನು ಮಣ್ಣಿನ ಮಡಕೆಯಲ್ಲಿಟ್ಟು ಕೃಷ್ಣ ಭಟ್ ಪೌರೋಹಿತ್ಯದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಶಂಕರ್ ಸೋಮೇಶ್ವರ್ ವಿಧಿವಿಧಾನ ನೆರವೇರಿಸಿದರು. ಶ್ರಾದ್ಧ ಕರ್ಮ ಪ್ರಯುಕ್ತ ಕಾಗೆಗಳಿಗೆ ಪಿಂಡ ಇಟ್ಟ ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಅಸ್ತಿಯನ್ನು ಸಮುದ್ರಕ್ಕೆ ಅರ್ಪಿಸಿದರು. ಕಂದಾಯ ಸಚಿವ ಅಶೋಕ್ ಸೂಚನೆಯಂತೆ ಕೋವಿಡ್ನಿಂದ ಮೃತಪಟ್ಟ ನಿರ್ಗತಿಕರಿಗೆ ಮೋಕ್ಷ ಸಿಗಬೇಕೆಂಬ ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಮಂದಿಯ ಚಿತಾಭಸ್ಮ ಸಮುದ್ರಕ್ಕೆ ಅರ್ಪಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ತಹಸೀಲ್ದಾರ್ ಗುರುಪ್ರಸಾದ್, ಕಂದಾಯ ನಿರೀಕ್ಷಕ ಸ್ಟೀಫನ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಕಸ್ತೂರಿ ಪಂಜ, ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ವಿ.ಆಳ್ವ, ಉಳ್ಳಾಲ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ಹೌಸ್, ಮುಖಂಡರಾದ ಚಂದ್ರಹಾಸ ಉಳ್ಳಾಲ್, ಯಶವಂತ ಅಮೀನ್, ಚಂದ್ರಶೇಖರ ಉಚ್ಚಿಲ್, ಗೋಪಿನಾಥ್ ಬಗಂಬಿಲ, ನವೀನ್ ಪಾದಲ್ಪಾಡಿ, ಅನಿಲ್ ಬಗಂಬಿಲ, ಜೀವನ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.