ಬೈಲಹೊಂಗಲ: ಲಕ್ಷಾಂತರ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಸಿಕ್ಕಿರುವುದು ಪುಣ್ಯವಾಗಿದ್ದು, ಈ ಜನ್ಮದಲ್ಲಿ ಅಧರ್ಮದ ದಾರಿ ಹಿಡಿಯದೇ ಧರ್ಮದ ಹಾದಿಯಲ್ಲಿ ಜೀವನ ಸವೆಸಿ ಮುಕ್ತಿ ಪಡೆಯಬೇಕು ಎಂದು ಹುಬ್ಬಳ್ಳಿಯ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.
ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಡಾ.ಶಿವಾನಂದ ಭಾರತಿ ಸ್ವಾಮೀಜಿ 84ನೇ ಜಯಂತ್ಯುತ್ಸವ ಹಾಗೂ ವಿಶ್ವಶಾಂತಿಗಾಗಿ 54ನೇ ಅಖಿಲ ಭಾರತ ವೇದಾಂತ್ ಪರಿಷತ್ತಿನಲ್ಲಿ ಶನಿವಾರ ಏರ್ಪಡಿಸಿದ್ದ ಎರಡನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮನುಷ್ಯನ ಜೀವನ ಗುರುವಿನ ಅಮತ ವಾಣಿಗಳಿಂದ ಪಾವನಗೊಂಡು ಅಧ್ಯಾತ್ಮಕ್ಕೆ ಶರಣಾಗುತ್ತದೆ. ನಾವು ಮಾಡುವ ಪುಣ್ಯ-ಪಾಪಗಳ ಮೇಲೆ ಮುಕ್ತಿ ಸಿಗುತ್ತದೆ. ಪ್ರವಚನ ಆಲಿಸುವುದು ಜ್ಞಾನದ ಯಜ್ಞ. ಅಧ್ಯಾತ್ಮ ಚಿಂತನೆ ಮಾಡುವುದರಿಂದ ನಾವು ಬ್ರಹ್ಮಲೀನವಾಗುತ್ತೇವೆ ಎಂದರು.
ಹರಳಕಟ್ಟಿ ಶಿವಾನಂದ ಬ್ರಹ್ಮವಿದ್ಯಾಶ್ರಮದ ನಿಜಗುಣ ಸ್ವಾಮೀಜಿ ಮಾತನಾಡಿ, ಯಜ್ಞದಿಂದ ನಾವು ಮಾಡುವ ಕರ್ಮಗಳು ದೂರವಾಗುತ್ತವೆ. ನಿತ್ಯ ಭಗವಂತನ ನಾಮಸ್ಮರಣೆ ಮಾಡಬೇಕು. ದಾನ ಮಾಡುವುದು, ಧರ್ಮದಲ್ಲಿ ನಡೆಯುವುದು ಕೂಡ ಒಂದು ಯಜ್ಞ ಎಂದರು. ಖುರ್ದಕಂಚನಳ್ಳಿಯ ಸುಬ್ರಮಣ್ಯ ಸ್ವಾಮೀಜಿ ಮಾತನಾಡಿ, ಮೃದುವಾದ ಮಾತುಗಳು ಅಮೃತಕ್ಕೆ ಸಮಾನ. ಮನುಷ್ಯನ ವಿನಯ ಮಾತುಗಳು ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.
ಡಾ.ಶಿವಾನಂದ ಭಾರತಿ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನಮ್ಮ ನಡೆ, ನುಡಿ ನಮ್ಮ ವ್ಯಕ್ತಿತ್ವ ತೋರಿಸುತ್ತದೆ. ಕೆಟ್ಟ ಮಾತು ದ್ವೇಷ, ಅಸೂಯೆ ನೀಡಿದರೆ, ಒಳ್ಳೆಯ ಮಾತು ಪ್ರೀತಿ, ಕಾಳಜಿ, ವಿಶ್ವಾಸ, ಪ್ರಾಮಾಣಿಕತೆ ನೀಡುತ್ತದೆ. ನಮ್ಮ ಮಾತು ಮಧುರವಾಗಿದ್ದರೆ ಜೀವನ ಹಸನಾಗುವುದು. ಸಾಧು, ಸಂತರ ದರ್ಶನ ವಾಣಿ ನಮ್ಮನ್ನು ಶುಭ್ರಗೊಳಿಸುತ್ತದೆ ಎಂದರು.
ಮುರಗೋಡದ ನೀಲಕಂಠ ಸ್ವಾಮೀಜಿ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ದಾವಣಗೆರೆಯ ಜಡಿಶಾಂತಾಶ್ರಮದ ಶಿವಾನಂದ ಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ, ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಹಡಗಿನಾಳದ ಮಲ್ಲೇಶ್ವರ ಶರಣರು, ತೊಂಡಿಕಟ್ಟಿ ಅವಧೂತ ಗಾಳೇಶ್ವರ ಮಠದ ಅಭಿನವ ವೆಂಕಟೇಶರ ಸ್ವಾಮೀಜಿ, ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ಖೋದಾನಪುರ ಶಾಂಭವಿ ಆಶ್ರಮದ ಜಾನಮ್ಮತಾಯಿ, ಸವಟಗಿ ನಿಂಗಾನಂದ ಸ್ವಾಮೀಜಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ ತಾಯಿ, ಬಾದಾಮಿಯ ದಯಾಭಾರತಿ ತಾಯಿ, ತುಂಗಳದ ಅನಸೂಯಾ ತಾಯಿ ಹಾಗೂ ಸಹಸ್ರಾರು ಸದ್ಭಕ್ತರು ಉಪಸ್ಥಿತರಿದ್ದರು.