ನವದೆಹಲಿ: ಜಾಗತಿಕವಾಗಿ ಬಾಧಿಸುತ್ತಿರುವ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದ ಅಭಿವೃದ್ಧಿಪಡಿಸಲು ಭಾರತದ ಒಂದೆರಡು ಕಂಪನಿಗಳು ತುರುಸಿನ ಸ್ಪರ್ಧೆಗೆ ಇಳಿದಿವೆ. ಇದೇ ವೇಳೆ 2020ರ ಸ್ವಾತಂತ್ರ್ಯೋತ್ಸವದ ವೇಳೆಗೆ ಭಾರತದ ಮೊದಲ ದೇಶಿಯ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯದ್ದಾಗಿದೆ (ಐಸಿಎಂಆರ್). ತನ್ಮೂಲಕ ಆದಷ್ಟು ಬೇಗ ಕೋವಿಡ್-19 ಮುಕ್ತ ಭಾರತ ನಿರ್ಮಾಣದ ಕನಸಿಗೆ ಕಿಚ್ಚುಹೊತ್ತಿಸಿದೆ.
ಕೆಲದಿನಗಳ ಹಿಂದಷ್ಟೇ ಕೊವ್ಯಾಕ್ಸಿನ್ ಎಂಬ ಚುಚ್ಚುಮದ್ದು ಸಿದ್ಧಪಡಿಸಿದ್ದು, ಮಾನವರ ಮೇಲೆ ಪ್ರಯೋಗಿಸಲು ಅಗತ್ಯ ಅನುಮತಿ ದೊರೆತಿರುವುದಾಗಿ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಘೋಷಿಸಿತ್ತು. ಇದೀಗ ಆದ್ಯತೆಯ ಮೇರೆಗೆ ಈ ಚುಚ್ಚುಮದ್ದನ್ನು ಮಾನವರ ಮೇಲೆ ಪರೀಕ್ಷೆ ಮಾಡಲಾಗುತ್ತಿದೆ.
ಇದನ್ನೂ ಓದಿ: ದೇಶಿಯವಾಗಿ ಸಿದ್ಧವಾಗಿರುವ ಮತ್ತೊಂದು ಕೋವಿಡ್ ಚುಚ್ಚುಮದ್ದು ಕ್ಲಿನಿಕಲ್ ಟ್ರಯಲ್ಗೆ ಅನುಮತಿ
ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಹೆಲ್ತ್ಕೇರ್ ಸಂಸ್ಥೆ ಕೂಡ ತಾನು ಸಿದ್ಧಪಡಿಸಿರುವ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದಿನ ಪ್ರಾಣಿಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ. ಮನುಷ್ಯರ ಮೇಲೆ ಅದರ ಪ್ರಯೋಗಕ್ಕೆ ಅಗತ್ಯ ಅನುಮತಿಗಳನ್ನು ಪಡೆದುಕೊಂಡಿರುವುದಾಗಿ ಶುಕ್ರವಾರ ಹೇಳಿತ್ತು. ಇದರ ಪರೀಕ್ಷೆ ಕೂಡ ಈ ತಿಂಗಳಲ್ಲೇ ಆರಂಭವಾಗುವ ಸಾಧ್ಯತೆ ಇದೆಯಾದರೂ, ದಿನಾಂಕ ನಿಗದಿಯಾಗಿಲ್ಲ.
ಐಸಿಎಂಆರ್ ಪ್ರಕಾರ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಎಂಬ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದುಗಳ ಮಾನವರ ಮೇಲಿನ ಪ್ರಯೋಗಕ್ಕೆ 12 ಸ್ಥಳಗಳನ್ನು ನಿರ್ಧರಿಸಲಾಗಿದೆ. ಈ ಪರೀಕ್ಷೆಗಾಗಿ ಜುಲೈ 7ರೊಳಗೆ ಕರೊನಾ ಪೀಡಿತರ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಆ 12 ವೈದ್ಯಕೀಯ ಸಂಸ್ಥೆಗಳು ಮತ್ತು ಪ್ರಮುಖ ಪರೀಕ್ಷಣಾಧಿಕಾರಿಗಳಿಗೆ ಐಸಿಎಂಆರ್ ಸೂಚಿಸಿದೆ.
ಕೊವ್ಯಾಕ್ಸಿನ್ ಪರೀಕ್ಷೆಗೆ ಆದ್ಯತೆ: ದೇಶಿಯವಾಗಿ ಮೊದಲು ಅಭಿವೃದ್ಧಿಪಡಿಸಲಾದ ಕೋವಿಡ್-19 ರೋಗನಿರೋಧಕ ಎಂಬ ಹೆಗ್ಗಳಿಕೆಯ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಚುಚ್ಚುಮದ್ದಿನ ಪರೀಕ್ಷೆಗೆ ಆದ್ಯತೆ ನೀಡಲಾಗಿದೆ.
ಇದನ್ನೂ ಓದಿ: ಲಡಾಖ್ನ ಮುಂಚೂಣಿ ನೆಲೆಗಳಿಗೆ ಪ್ರಧಾನಿ ಮೋದಿ ಭೇಟಿ
ಕೊವ್ಯಾಕ್ಸಿನ್ ಚುಚ್ಚುಮದ್ದನ್ನು ಆಗಸ್ಟ್ 15ರೊಳಗೆ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ. ಆದ್ದರಿಂದ, ಆ ವೇಳೆಗೆ ಇದರ ಕ್ಲಿನಿಕಲ್ ಟ್ರಯಲ್ಗಳನ್ನು ಮುಗಿಸಬೇಕಿದೆ. ಈ ಗುರಿ ಸಾಧನೆಗಾಗಿ ಬಿಬಿಐಎಲ್ ಕೂಡ ಶ್ರಮಿಸುತ್ತಿದೆ. ಮಾನವರ ಮೇಲಿನ ಪ್ರಯೋಗದ ಯಶಸ್ಸಿಗೆ ಟ್ರಯಲ್ಗಾಗಿ ಆಯ್ಕೆ ಮಾಡಿರುವ ಸ್ಥಳಗಳ ಸಹಕಾರವೂ ಅಗತ್ಯವಾಗಿದೆ. ಹಾಗಾಗಿ ಇದಕ್ಕೆ ಎಲ್ಲ ರೀತಿಯಲ್ಲೂ ಸಹಕಾರ ನೀಡಬೇಕು ಎಂದು ಟ್ರಯಲ್ಗಾಗಿ ಆಯ್ಕೆ ಮಾಡಿರುವ ತಾಣಗಳ ಮುಖ್ಯಸ್ಥರಿಗೆ ಐಸಿಎಂಆರ್ನ ಮಹಾಪ್ರಧಾನ ನಿರ್ದೇಶಕ ಡಾ. ಬಲರಾಂ ಭಾರ್ಗವ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಕೊವ್ಯಾಕ್ಸಿನ್ನ ಪರೀಕ್ಷೆಗೆ ಅಗತ್ಯ ಸಹಕಾರ ಕೊಡದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹಾಗಾಗಿ ಈ ಪರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡಿ, ನಿಗದಿತ ಸಮಯದೊಳಗೆ ಪೂರೈಸಲು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ.
ಆಂಬುಲೆನ್ಸ್ನಲ್ಲೇ ಹೆರಿಗೆ