ನವದೆಹಲಿ: ಕರೊನಾ ವೈರಸ್ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಳೆದ ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮಾ.22ರಂದು ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಅದಕ್ಕೆ ದೇಶದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಆದರೆ ಕರೊನಾ ವೈರಸ್ ಬಗ್ಗೆ ಜನರಿನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ. ಲಾಕ್ಡೌನ್, ಸೆಕ್ಷನ್ 144 ಜಾರಿಯಲ್ಲಿದ್ದರೂ ಜನರು ಬೀದಿಗಿಳಿಯುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮತ್ತೆ ಕರೊನಾ ವೈರಸ್ ನಿಯಂತ್ರಣ, ಮುಂಜಾಗ್ರತೆ ಬಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಮಾ.22ರಂದು ಜನತಾ ಕರ್ಫ್ಯೂವನ್ನು ಇಡೀ ದೇಶದ ಜನರು ಒಗ್ಗಟ್ಟಾಗಿ ನಡೆಸಿದ್ದಾರೆ. ಈ ಮೂಲಕ ಯಾವುದೇ ಸಂಕಷ್ಟ ಬಂದರೂ ಒಗ್ಗಟ್ಟಾಗಿ ಇರುತ್ತೇವೆ ಎಂಬುದನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ಹಾಗೇ ಇಂದು ರಾತ್ರಿ 12 ಗಂಟೆಯಿಂದ ಇಡೀ ಭಾರತ ಲಾಕ್ಡೌನ್ ಆಗಲಿದೆ ಎಂದು ನರೇಂದ್ರ ಮೋದಿ ಘೋಷಿಸಿದರು. ಪ್ರತಿ ರಾಜ್ಯ, ಹಳ್ಳಿ, ಜಿಲ್ಲೆಗಳು ಲಾಕ್ಡೌನ್ ಆಗಲಿದೆ. ಇದೂ ಕೂಡ ಕರ್ಫ್ಯೂದಂತೆಯೇ ಆಗಿದೆ. ಕರೊನಾದಿಂದ ಭಾರತವನ್ನು, ಭಾರತದ ಜನರನ್ನು ಕಾಪಾಡಲು ಸಂಪೂರ್ಣ ಲಾಕ್ಡೌನ್ ಒಂದೇ ಪರಿಹಾರ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
21 ದಿನಗಳ ಕಾಲ ಈ ಲಾಕ್ಡೌನ್ ಇರಲಿದೆ. ಅಷ್ಟಾಗಿ ಕೂಡ ಕರೊನಾ ನಿಯಂತ್ರಣಕ್ಕೆ ಬಾರದೆ ಇದ್ದರೆ ಲಾಕ್ಡೌನ್ ಮುಂದುವರಿಯಲಿದೆ. (ಏಜೆನ್ಸೀಸ್)