ನವದೆಹಲಿ: ದೆಹಲಿಯ ಕೆಂಪುಕೋಟೆಯ ಘಟನಾವಳಿಯ ಮುಖ್ಯ ಆರೋಪಿಯಾಗಿರುವ ಪಂಜಾಬಿ ನಟ ದೀಪ್ ಸಿಧು ಫೇಸ್ಬುಕ್ ಖಾತೆಯನ್ನು ಆತನ ಸ್ನೇಹಿತೆಯೊಬ್ಬಳು ವಿದೇಶದಿಂದ ಆಪರೇಟ್ ಮಾಡುತ್ತಿರುವ ಸಂಗತಿ ಬಯಲಾಗಿದೆ. ಜನವರಿ 26 ರ ಗಲಭೆಯ ನಂತರ ಪೊಲೀಸರಿಂದ ತಲೆ ಮರೆಸಿಕೊಂಡಿರುವ ಸಿಧು ಫೇಸ್ಬುಕ್ನಲ್ಲಿ ರೈತ ನಾಯಕರಿಗೆ ಸಂದೇಶ ನೀಡಿರುವ ವೀಡಿಯೋಗಳ ಬಗ್ಗೆ ತನಿಖೆ ನಡೆಸಿದ ದೆಹಲಿ ಪೊಲೀಸರಿಗೆ ಈ ವಿಷಯ ತಿಳಿದುಬಂದಿದೆ.
ಜನವರಿ 26 ರಂದು ರೈತಪ್ರತಿಭಟನಾಕಾರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದ್ದಲ್ಲದೆ, ಕೆಂಪುಕೋಟೆಯಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದಕ್ಕೆ ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ದೀಪ್ ಸಿಧು ಆ ನಂತರದಿಂದ ತಲೆಮರೆಸಿಕೊಂಡಿದ್ದಾನೆ. ದೆಹಲಿ ಪೊಲೀಸ್ ಅಪರಾಧ ವಿಭಾಗದ ಹಲವು ತಂಡಗಳು ಸಿಧು ಹುಡುಕಾಟ ನಡೆಸಿದ್ದು, ಅವನ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಕೂಡ ಘೋಷಿಸಲಾಗಿದೆ. ಆದರೆ ಈ ನಡುವೆ ದೆಹಲಿಯಲ್ಲಿ ನಡೆದ ಘಟನೆಗಳಿಗೆ ಪಂಜಾಬಿ ಭಾಷೆಯಲ್ಲಿ ವಿವರಣೆ ನೀಡಿರುವ ವೀಡಿಯೋ ಮತ್ತು ರೈತ ಚಳುವಳಿಕಾರರಿಗೆ ಒಗ್ಗಟ್ಟಾಗಿ ಮುಂದುವರೆಯುವಂತೆ ಕರೆ ನೀಡಿರುವ ವೀಡಿಯೋಗಳು ಸಿಧು ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಆಗಿವೆ.
ಇದನ್ನೂ ಓದಿ: ಕೆಂಪುಕೋಟೆ ಗಲಭೆ ಆರೋಪಿಗಳ ಸುಳಿವು ನೀಡಿದರೆ 1 ಲಕ್ಷ ರೂಪಾಯಿ ಬಹುಮಾನ
ಸಿಧು ಈ ವೀಡಿಯೋಗಳನ್ನು ಚಿತ್ರೀಕರಿಸಿ ವಿದೇಶದಲ್ಲಿರುವ ತನ್ನ ಸ್ನೇಹಿತೆಗೆ ಕಳುಹಿಸುತ್ತಿದ್ದು, ಆಕೆ ಅಲ್ಲಿಂದ ಅವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೆಹಲಿ ಹಿಂಸಾಚಾರದ ಬಗ್ಗೆ ವಿವರಣೆ ನೀಡಲು, ರೈತ ನಾಯಕರಿಗೆ ಸಂದೇಶ ನೀಡಲು ಈ ವೀಡಿಯೋಗಳನ್ನು ಸಿಧು ಬಳಸಿಕೊಂಡಿದ್ದಾನೆ. ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಸಿಧುವಿಗೆ ಸಹಾಯ ಮಾಡುತ್ತಿರುವ ಈ ಮಹಿಳೆ ಯಾರು, ಆಕೆಯ ಮೇಲೆ ಏನು ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ಈವರೆಗೆ ಪೊಲೀಸರು ಮಾಹಿತಿ ನೀಡಿಲ್ಲ.
ಕೆಂಪುಕೋಟೆಯಲ್ಲಿ ನಡೆದ ಘಟನೆಗಳಿಗೆ ಕಾರಣರಾಗಿದ್ದಕ್ಕೆ ದೀಪ್ ಸಿಧು ಸೇರಿ ಹಲವರನ್ನು ಪೊಲೀಸರು ಹುಡುಕುತ್ತಿದ್ದರೆ, ಅತ್ತ ರೈತ ನಾಯಕರೂ ತಮ್ಮ ಚಳುವಳಿಯನ್ನು ಹಾದಿ ತಪ್ಪಿಸುವ ಸಂಚು ನಡೆಸಿದ್ದಾನೆಂದು ದೀಪ್ ಸಿಧುವನ್ನು ದೂರಿದ್ದಾರೆ.(ಏಜೆನ್ಸೀಸ್)
‘ಕೃಷಿ ಕಾನೂನುಗಳಲ್ಲಿ ಲೋಪವೇನು ತೋರಿಸಿ’ ಎಂದು ಸವಾಲು ಹಾಕಿದ ತೋಮರ್
ಸರ್ಕಾರಿ ಅಧಿಕಾರಿಯ ಸೋಗು ಹಾಕಿದ, ಉದ್ಯೋಗ ಖಾತ್ರಿ ಮಾಡಿಸುವೆ ಎಂದ !