ಚಿತ್ರದುರ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಜಿಲ್ಲಾಡಳಿತ ಮಂಗಳವಾರ ಸ್ವಾತಂತ್ರ್ಯ ಹೋರಾಟಗಾರರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿತು.
ತುರುವನೂರು ಹೋಬಳಿ ಕೂನಬೇವಿನ ಎನ್.ಭೀಮಪ್ಪ ಹಾಗೂ ನೇರನಾಳ್ ಗ್ರಾಮದ ತಿಮ್ಮಾರೆಡ್ಡಿ ಅವರ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರರ ಆರೋಗ್ಯ ವಿಚಾರಿಸಿ, ಗೌರವಿಸಿದರು.
ತಹಸೀಲ್ದಾರ್ ಸತ್ಯನಾರಾಯಣ, ಉಪತಹಸೀಲ್ದಾರ್ ಪ್ರಕಾಶ್, ರಾಜಸ್ವ ನಿರೀಕ್ಷಕ ಎಂ. ಎನ್.ಸ್ವಾಮಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿದ್ದರು.
ಅದರಂತೆ ಹಿರಿಯೂರು ತಾಲೂಕಿನ ಹರಿಯಬ್ಬೆ ಪಾಳ್ಯ ಗ್ರಾಮದ ಸ್ವಾತಂತ್ರ್ಯೊಧ ಕರಿಯಪ್ಪ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಸ್ವಾತಂತ್ರ್ಯ ಹೋರಾಟದ ದಿನಗಳ ಕುರಿತು ಕರಿಯಪ್ಪ ಸ್ಮರಿಸಿದರು.
ಹಿರಿಯೂರು ತಾಲೂಕಿನಲ್ಲಿ ನಾಲ್ವರು ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ದೇಶಕ್ಕಾಗಿ ಅವರು ಕೊಟ್ಟ ಕೊಡುಗೆ, ಹೋರಾಟ ಸ್ಮರಣೀಯ ಎಂದು ಡಿಸಿ ಕವಿತಾ ಹೇಳಿದರು.
ಐಮಂಗಲ ಹೋಬಳಿಯ ಕೋವೇರಹಟ್ಟಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗೋವಿಂದಪ್ಪ, ಮರಡಿಹಳ್ಳಿ ಗ್ರಾಮದ ಹನುಮಂತಪ್ಪ ಹಾಗೂ ಭೀಮಪ್ಪ ಅವರನ್ನು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಶಾಲು ಹೊದಿಸಿ, ಗಂಧದ ಹಾರ ಹಾಕಿ ಸನ್ಮಾನಿಸಿದರು.
ಈ ವೇಳೆ ಹಿರಿಯ ಹೋರಾಟಗಾರರ ಆರೋಗ್ಯ ವಿಚಾರಿಸಿ, ಹಿರಿಯರು ಸ್ವಾತಂತ್ರ್ಯ್ಕಾಗಿ ಹೋರಾಡಿದ್ದೀರಿ. ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ ಎಂದರು.